‘ಹೊರಗೆ ಬರ್ತಾರೆ ಮೈತ್ರಿ ಪಕ್ಷದ ಅತ್ಯಧಿಕ ಶಾಸಕರು : ಈ ಕ್ಷೇತ್ರದವರು ಇರಬಹುದು’
ಅತ್ಯಧಿಕ ಸಂಖ್ಯೆಯಲ್ಲಿ ಶಾಸಕರು ಮೈತ್ರಿಯಿಂದ ಹೊರಗೆ ಬರುತ್ತಾರೆ ಎಂದು ನಾಯಕರೋರ್ವರು ಭವಿಷ್ಯ ನುಡಿದಿದ್ದಾರೆ.
ವಿಜಯಪುರ : ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಇದೇ ಬೆನ್ನಲ್ಲೇ ಹಲವು ಮುಖಂಡರಿಂದ ಅಸಮಾಧಾನ ಭುಗಿಲೇಳುತ್ತಿದೆ.
ಈ ನಿಟ್ಟಿನಲ್ಲಿ ಅಸಮಾಧಾನದಿಂದಲೇ ಮೈತ್ರಿ ಸರ್ಕಾರ ಸಮಸ್ಯೆ ಎದುರಿಸಲಿದೆ ಎಂದು ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಯಾರೂ ನಂಬಲಾರದಷ್ಟು ಸಂಖ್ಯೆಯಲ್ಲಿ ಮೈತ್ರಿ ಸರ್ಕಾರದಿಂದ ಶಾಸಕರು ಹೊರಗೆ ಬರುತ್ತಾರೆ. ಹೊರಗೆ ಬರುವವರ ಲಿಸ್ಟ್ ನಲ್ಲಿ ಯಾವ ಕ್ಷೇತ್ರದವರಿದ್ದಾರೆ ಎನ್ನುವುದು ಗೊತ್ತಿಲ್ಲ.ವಿಜಯಪುರ, ಮೈಸೂರು, ಕೋಲಾರ ಯಾವ ಶಾಸಕರೂ ಇರಬಹುದು ಎಂದರು.
ಮೈತ್ರಿ ಸರ್ಕಾರ ಭದ್ರವಾಗಿದೆ ಎನ್ನುವುದು ಮೂರ್ಖತನದ ಹೇಳಿಕೆಯಾಗಿದೆ. ಸಿಎಂ ಕುಮಾರಸ್ವಾಮಿ ಕೆಟ್ಟ ಸರ್ಕಾರ ನಡೆಸುವುದಕ್ಕಿಂತ ರಾಜೀನಾಮೆ ನೀಡಲಿ. ಅವರ ಗೌರವ, ಸ್ವಾಭಿಮಾನ ಉಳಿಯಬೇಕೆಂದರೆ ರಾಜ್ಯಪಾಲರಿಗೆ ರಾಜೀನಾಮೆ ನೀಡಲಿ.
ಕೆಟ್ಟ ಹಗರಣ, ಜಗಳ, ಅಭಿವೃದ್ಧಿ ಇಲ್ಲದ ಸರ್ಕಾರ ಆದಷ್ಟು ಬೇಗ ಹೊರಗೆ ಹೋಗಲಿ ಎಂದು ಬಸನಗೌಡ ಪಾಟೀಲ್ ಹೇಳಿದರು.