Asianet Suvarna News Asianet Suvarna News

ಉಳ್ಳಾಲ ಕಡಲತಡಿಯಲ್ಲಿ ವಿಚಿತ್ರವಾದ ವಿದ್ಯಮಾನ..!

ನ.19 ರಂದು ನಸುಕಿನಲ್ಲಿ ಸೋಮೇಶ್ವರದ ಸೀಗ್ರೌಂಡ್ ಸಮೀಪ ಮೊದಲಿಗೆ ಬೂತಾಯಿ ಮೀನಿನ ರಾಶಿ ಪತ್ತೆಯಾಗಿತ್ತು. ಅದನ್ನು ಅಲ್ಲಿನ ಭಾಗದ ಜನ ಹಾಗೂ ಮೀನುಗಾರರು ಮನೆಗೆ ಕೊಂಡೊಯ್ದರಲ್ಲದೆ, ಕೆಲವರು ಮಾರಾಟವನ್ನು ನಡೆಸಿದ್ದರು. ಮರುದಿನವೂ ಉಳ್ಳಾಲ ತೀರದ ವಿವಿಧೆಡೆ ಮೀನಿನ ರಾಶಿಯೇ ಪತ್ತೆಯಾಗಿತ್ತು. ಅಂದು ಕೂಡಾ ಸ್ಥಳೀಯರಿಗೆ ಮೀನಿನ ಸುಗ್ಗಿಯಾಗಿತ್ತು.

Many Fishes Found in Ullal Beach

ಉಳ್ಳಾಲ(ನ.23):  ಕಳೆದ ಮೂರು ದಿನಗಳಿಂದ ಉಳ್ಳಾಲದ ಸಮುದ್ರ ತೀರದಲ್ಲಿ ವಿಚಿತ್ರವಾದ ವಿದ್ಯಮಾನವೊಂದು ನಡೆಯುತ್ತಿದ್ದು, ಬೂತಾಯಿ ಮೀನುಗಳ ರಾಶಿ ಸಿಗುತ್ತಿದೆ. ಇದು ಸ್ಥಳೀಯರಿಗೆ ಹಾಗೂ ಮೀನುಗಾರರಿಗೆ ಮೀನಿನ ಸುಗ್ಗಿಯ ವಾತಾವರಣ ನಿರ್ಮಾಣವಾಗಿದೆ. ಉಳ್ಳಾಲದ ಸೀಗ್ರೌಂಡ್, ಮೊಗವೀರಪಟ್ನ, ಕೈಕೋ, ಕಿಲಿರಿಯಾ ನಗರ, ಸೋಮೇಶ್ವರ ಸಮುದ್ರ ತೀರದಲ್ಲಿ ಅಲ್ಲಲ್ಲಿ ಬೂತಾಯಿ ಮೀನುಗಳ ರಾಶಿಯೇ ಸಿಗುತ್ತಲಿದೆ.

ನ.19 ರಂದು ನಸುಕಿನಲ್ಲಿ ಸೋಮೇಶ್ವರದ ಸೀಗ್ರೌಂಡ್ ಸಮೀಪ ಮೊದಲಿಗೆ ಬೂತಾಯಿ ಮೀನಿನ ರಾಶಿ ಪತ್ತೆಯಾಗಿತ್ತು. ಅದನ್ನು ಅಲ್ಲಿನ ಭಾಗದ ಜನ ಹಾಗೂ ಮೀನುಗಾರರು ಮನೆಗೆ ಕೊಂಡೊಯ್ದರಲ್ಲದೆ, ಕೆಲವರು ಮಾರಾಟವನ್ನು ನಡೆಸಿದ್ದರು. ಮರುದಿನವೂ ಉಳ್ಳಾಲ ತೀರದ ವಿವಿಧೆಡೆ ಮೀನಿನ ರಾಶಿಯೇ ಪತ್ತೆಯಾಗಿತ್ತು. ಅಂದು ಕೂಡಾ ಸ್ಥಳೀಯರಿಗೆ ಮೀನಿನ ಸುಗ್ಗಿಯಾಗಿತ್ತು. ಆದರೆ ಮಂಗಳವಾರ ಬೆಳಿಗ್ಗೆ ತೀರದಲ್ಲಿ ಕಾದ ಜನರಿಗೆ ಮೀನು ಸಿಕ್ಕಿರಲಿಲ್ಲ. ಬುಧವಾರ ಮತ್ತೆ ಉಳ್ಳಾಲ ಭಾಗದ ಸಮುದ್ರ ತೀರದಲ್ಲಿ ಬೂತಾಯಿ ಮೀನಿನ ರಾಶಿಯೇ ಪತ್ತೆಯಾಗಿದೆ. ಕ್ಷಣ ಕ್ಷಣಕ್ಕೆ ಸಮುದ್ರ ತೀರಕ್ಕೆ ಬಂದು ಜೀವಂತ ಮೀನುಗಳು ಬೀಳುತ್ತಿದ್ದವು. ಸುದ್ದಿ ಹಬ್ಬುತ್ತಿದ್ದಂತೆ ಹಲವರು ವಾಹನದ ಮೂಲಕ ಟನ್ ಲೆಕ್ಕದಲ್ಲಿ ಮೀನು ಕೊಂಡೊಯ್ದರೆ, ಸ್ಥಳೀಯರು ಕೈಚೀಲಗಳಲ್ಲಿ ತುಂಬಿಸಿ ಮನೆಗೆ ಕೊಂಡೊಯ್ದಿದ್ದಾರೆ.

ಐದು ವರ್ಷಗಳ ಹಿಂದೆಯೂ ಉಳ್ಳಾಲ ಭಾಗದಲ್ಲಿ ಇದೇ ರೀತಿಯಲ್ಲಿ ಬೂತಾಯಿ ಮೀನುಗಳು ಬಂದು ಬಿದ್ದಿದ್ದವು. ಸಮುದ್ರ ತೀರದಲ್ಲೇ ಮೀನುಗಳು ಗುಂಪಾಗಿ ಸಂಚರಿಸಿದಲ್ಲಿ ಬಲೆಯಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಸಮುದ್ರ ತೀರಕ್ಕೆ ಬಂದು ಬೀಳುವ ಸಾಧ್ಯತೆಗಳಿವೆ ಅನ್ನುವುದು ಸ್ಥಳೀಯ ಹಿರಿಯರ ಅಭಿಪ್ರಾಯ. ಬೂತಾಯಿ ಮೀನುಗಳು ಸಾಲಿನಲ್ಲಿ ಸಂಚರಿಸುತ್ತಿದ್ದರೆ, ಸಮುದ್ರದಲ್ಲಿ ರೈಲು ಹೋದಂತಹ ಶಬ್ದವಿರುತ್ತದೆ. ಜತೆಯಾಗಿ ತೆರಳುವ ಮೀನುಗಳಿಗೆ ಬಲೆ ಹಾಕಿದರೂ 2 ಅಡಿವರೆಗೂ ಬಲೆಯನ್ನು ಎಬ್ಬಿಸುವ ಶಕ್ತಿ ಒಗ್ಗಟ್ಟಾಗಿರುವ ಮೀನುಗಳಿಗಿದೆ. ಬಹಳ ಎಚ್ಚರಿಕೆಯಿಂದ ಸಾಗುವ ಬೂತಾಯಿ ಮೀನುಗಳಿಗೆ ಬಂಡೆ ಕಲ್ಲು, ದೊಡ್ಡ ಮೀನುಗಳು ಇವೆ ಎಂಬುದು ಶಬ್ದದಲ್ಲೇ ಅರಿವಾಗುತ್ತದೆ. ಅದರಿಂದ ತಪ್ಪಿಸಲು ಬಹು ದೂರದಿಂದಲೇ ಸಾಗುತ್ತವೆ. ಉಳ್ಳಾಲದಲ್ಲಿ ಮಂಜೇಶ್ವರ ಭಾಗದ ಮೀನುಗಾರರು ಸಮುದ್ರ ತೀರದ ಸಮೀಪದಲ್ಲೇ ಬಲೆಯನ್ನು ಹಾಕುತ್ತಿರುತ್ತಾರೆ. ಸಾಲಿನಲ್ಲಿ ಗುಂಪುಗೂಡಿ ಸಾಗುವ ಮೀನುಗಳು ಬಲೆಯಿಂದ ತಪ್ಪಿಸುವ ಧಾವಂತದಲ್ಲಿ ದಡಕ್ಕೆ ಬಿದ್ದಿರುವ ಸಾಧ್ಯತೆಗಳಿವೆ ಅನ್ನುವುದು ಮೀನುಗಾರ, ಉಳ್ಳಾಲ ನಿವಾಸಿ ಯೋಗೀಶ್ ಅವರ ಅಭಿಪ್ರಾಯವಾಗಿದೆ.

Follow Us:
Download App:
  • android
  • ios