ಬಿಹಾರ ಮುಖ್ಯಮಂತ್ರಿ ಮೇಲೆ ಚಪ್ಪಲಿ ಎಸೆತ: ಯುವಕನ ಬಂಧನ!
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ಚಪ್ಪಲಿ ಎಸೆತ! ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಿಎಂ ಮೇಲೆ ಚಪ್ಪಲಿ ಎಸೆದ ಯುವಕ! ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಸಭಿಕರ ಮೇಲೆ ಬಿದ್ದ ಚಪ್ಪಲಿ! ಚಪ್ಪಲಿ ಎಸೆದ ಯುವಕ ಚಂದನ್ ನನ್ನು ಬಂಧಿಸಿದ ಪೊಲೀಸರು
ಪಾಟ್ನಾ(ಅ.11): ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್ ಅವರ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆದ ಘಟನೆ ನಡೆದಿದೆ.
ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿತೀಶ್ ವೇದಿಕೆ ಮೇಲೆ ಆಸೀನರಾಗಿದ್ದಾಗ, ಯುವಕನೊಬ್ಬ ಚಪ್ಪಲಿ ಎಸೆದಿದ್ದಾನೆ. ಕೂಡಲೇ ಆತನನ್ನು ವಶಕ್ಕೆ ಪಡೆದ ಪೊಲೀಸರು, ಆತನನ್ನು ಸ್ಥಳದಿಂದ ದೂರ ಕರೆದುಕೊಂಡು ಹೋಗಿದ್ದಾರೆ.
ಯುವಕ ಎಸೆದ ಚಪ್ಪಲಿ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಸಭಿಕರ ಮೇಲೆ ಬಿದ್ದಿದ್ದು, ನಿತೀಶ್ ಕುಮಾರ್ ಅವರಿಗೆ ತಾಗಲಿಲ್ಲ ಎಂದು ವರದಿಗಳು ತಿಳಿಸಿವೆ.
ಚಪ್ಪಲಿ ಎಸೆದ ವ್ಯಕ್ತಿಯನ್ನು ಚಂದನ್ ಎಂದು ಗುರುತಿಸಲಾಗಿದೆ. ಯುವಕ ಚಪ್ಪಲಿ ಎಸೆಯುತ್ತಿದ್ದಂತೇ ಕ್ರೋಧಗೊಂಡ ಕಾರ್ಯಕರ್ತರು, ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದ್ದು, ಸದ್ಯ ಯುವಕನನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.