ವಿದ್ಯುತ್ ಕಂಬ ಏರಿದ ಭೂಪ
ವ್ಯಕ್ತಿಯೊಬ್ಬ ವಿದ್ಯುತ್ ಕಂಬ ಏರಿದ್ದು, ಇದರಿಂದ ಕೆಲಕಾಲ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದ್ದ ಘಟನೆ ಭಾಲ್ಕಿ ಪಟ್ಟಣದಲ್ಲಿ ಶುಕ್ರವಾರ ನಡೆಯಿತು.
ಭಾಲ್ಕಿ(ನ.25): ವ್ಯಕ್ತಿಯೊಬ್ಬ ವಿದ್ಯುತ್ ಕಂಬ ಏರಿ ಕೆಲಕಾಲ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ಪಟ್ಟಣದ ಬಸ್ ನಿಲ್ದಾಣ ಸಮೀಪದಲ್ಲಿ ಶುಕ್ರವಾರ ನಡೆದಿದೆ. ಬೆಳಗ್ಗೆ 11 ಗಂಟೆಯ ಸುಮಾರಿಗೆ ಬಸ್ ನಿಲ್ದಾಣ ಸಮೀಪದ ವಿದ್ಯುತ್ ಕಂಬ ಏರಿದ. ಇದರಿಂದ ಸಾರ್ವಜನಿಕರು ಗಾಬರಿಗೊಂಡು ಕೂಡಲೇ ಕಂಬಂದಿಂದ ಇಳಿದು ಬರುವಂತೆ ಪರಿಪರಿಯಾಗಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅದೃಷ್ಟವಶಾತ ಕಂಬದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಕೆಲವರೂ ಕೂಡಲೇ ಜೆಸ್ಕಾಂ ಕಚೇರಿಗೆ ವಿಷಯ ಮುಟ್ಟಿಸಿ ವಿದ್ಯುತ್ ಸಂಪರ್ಕ ಹಾಕದಂತೆ ಮನವಿ ಮಾಡಿದ್ದರು. ನಂತರ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ವ್ಯಕ್ತಿಯನ್ನು ಕಂಬದಿಂದ ಕೆಳಗೆ ಬರುವಂತೆ ಕೇಳಿಕೊಂಡರು ಬರಲಿಲ್ಲ. ನಂತರ ಅಗ್ನಿಶಾಮಕ ಸಿಬ್ಬಂದಿಗಳು ಏಣಿ ಸಹಾಯದಿಂದ ಆತನನ್ನು ಕೆಳಗೆ ಇಳಿಸಿದರು. ವ್ಯಕ್ತಿ ಕಂಬ ಏಕೆ ಏರಿದ ಎಂಬುದು ಸ್ಪಷ್ಟವಾಗಿ ಗೊತ್ತಾಗದಿದ್ದರೂ ಮಾನಸಿಕ ಅಸ್ವಸ್ಥ ಇರುವ ಕಾರಣಕ್ಕೆ ವ್ಯಕ್ತಿ ವಿದ್ಯುತ್ ಕಂಬ ಏರಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆತನ ಬಗ್ಗೆ ಯಾವುದೇ ಖಚಿತ ಮಾಹಿತಿ ತಿಳಿದು ಬಂದಿಲ್ಲ.