ತಂಟೆಗೆ ಬಂದರೆ ಪೀಸ್, ಪೀಸ್ ಆಗ್ತೀರಾ: ಬಿಜೆಪಿಗೆ ದೀದಿ ಎಚ್ಚರಿಕೆ
ತಂಟೆಗೆ ಬಂದರೆ ಚೂರು, ಚೂರು ಆಗ್ತೀರಾ: ಬಿಜೆಪಿಗೆ ದೀದಿ ಎಚ್ಚರಿಕೆ| ರಂಜಾನ್ ನಿಮಿತ್ತ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆ ಉದ್ದೇಶಿಸಿ ಮಾತನಾಡುವ ವೇಳೆ ದೀದಿ ಎಚ್ಚರಿಕೆ
ಕೋಲ್ಕತಾ[ಮೇ.06]: ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ರೀತಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಲ ವೃದ್ಧಿಸಿಕೊಂಡಿರುವ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ. ‘ನಮ್ಮ ತಂಟೆಗೆ ಬರುವವರು ಚೂರು ಚೂರು ಆಗಿ ಹೋಗುತ್ತಾರೆ’ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ರಂಜಾನ್ ನಿಮಿತ್ತ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆ ಉದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಮರು ಯಾವುದೇ ಕಾರಣಕ್ಕೂ ಹೆದರಬಾರದು. ನಮ್ಮ ತಂಟೆಗೆ ಬರಲು ಯತ್ನಿಸುವವರು ನಾಶವಾಗಿ ಹೋಗುತ್ತಾರೆ ಎಂಬರ್ಥದಲ್ಲಿ ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ಸೂರ್ಯೋದಯದ ಜತೆ ಹೋಲಿಕೆ ಮಾಡುತ್ತಿರುವುದಕ್ಕೂ ಚಾಟಿ ಬೀಸಿದ ಅವರು, ಸೂರ್ಯ ಹುಟ್ಟಿದಾಗ ಕಠೋರವಾಗಿರುತ್ತಾನೆ. ಮತಯಂತ್ರಗಳನ್ನು ವಶಪಡಿಸಿಕೊಂಡು ಬಿಜೆಪಿ ರಾಜ್ಯದಲ್ಲಿ ಉದಯವಾಗಿದೆ. ಸೂರ್ಯನ ಹಾದಿಯಲ್ಲೇ ಅದು ಸಾಗಲಿದೆ ಎಂದು ಬಿಜೆಪಿಯ ಸ್ಥಿತಿ ಇದೇ ರೀತಿ ಹೆಚ್ಚು ದಿನ ಇರುವುದಿಲ್ಲ ಎಂದು ವಿಶ್ಲೇಷಿಸಿದರು.
ರಂಜಾನ್ ಪ್ರಯುಕ್ತ ಉಪವಾಸ ಮಾಡಿದ್ದೀರಿ. ಚಿಂತೆ ಪಡಬೇಕಿಲ್ಲ. ಅಸಮಾಧಾನಕ್ಕೂ ಒಳಗಾಗಬೇಕಿಲ್ಲ. ಒಳ್ಳೆಯ ಕೆಲಸ ಮಾಡಿ, ಪ್ರಗತಿ ಹೊಂದಿರಿ. ಮಾನವೀಯತೆ ಪರ ಕೆಲಸ ಮಾಡಿ ಎಂದು ಮುಸಲ್ಮಾನರಿಗೆ ಕರೆ ನೀಡಿದರು.