ಮಮತಾ ರಾಕ್ಷಸಿ: ಬಿಜೆಪಿ ಶಾಸಕನ ಹೇಳಿಕೆ ಗಮನಿಸಿ!
ಬಿಜೆಪಿ-ಟಿಎಂಸಿ ನಡುವಿನ ರಾಜಕೀಯ ಗುದ್ದಾಟಕ್ಕೆ ಕೊನೆಯಿಲ್ಲ| ಪ.ಬಂಗಾಳ ದಾಟಿ ಉತ್ತರ ಪ್ರದೇಶಕ್ಕೆ ಕಾಲಿಟ್ಟ ರಾಜಕೀಯ ಜಗಳ| ಮಮತಾ ಬ್ಯಾನರ್ಜಿ ಅವರನ್ನು ರಾಕ್ಷಸಿ ಎಂದ ಉತ್ತರ ಪ್ರದೇಶ ಬಿಜೆಪಿ ಶಾಸಕ| ಮಮತಾ ಲಂಕೆಯಲ್ಲಿದ್ದ ರಾಕ್ಷಸಿಯರಂತೆ ಎಂದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್| ‘ಪ್ರಧಾನಿ ಮೋದಿ ಅವರನ್ನು ಪ್ರಭು ಶ್ರೀರಾಮ, ಯೋಗಿ ಆದಿತ್ಯನಾಥ್ ಹನುಮಾನ’|ರಾಕ್ಷಸಿ ಮಮತಾ ಬ್ಯಾನರ್ಜಿ ಸಂಹಾರ ಖಚಿತ ಎಂದ ಸುರೇಂದ್ರ ಸಿಂಗ್| ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಕಟುಕ ಎಂದ ಬಿಜೆಪಿ ಶಾಸಕ|
ಲಕ್ನೋ(ಜೂ.07): ಬಿಜೆಪಿ-ಟಿಎಂಸಿ ನಡುವಿನ ರಾಜಕೀಯ ಗುದ್ದಾಟ ಇಲ್ಲಿಗೆ ಮುಗಿಯುವಂತೆ ಕಾಣುತ್ತಿಲ್ಲ. ಈ ಜಗಳ ಇದೀಗ ಪ.ಬಂಗಾಳ ದಾಟಿ ಉತ್ತರ ಪ್ರದೇಶಕ್ಕೆ ಕಾಲಿಟ್ಟಿದೆ. ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಉತ್ತರಪ್ರದೇಶದ ಬಿಜೆಪಿ ಶಾಸಕರೊಬ್ಬರು ರಾಕ್ಷಸಿ ಎಂದು ಜರೆದಿದ್ದಾರೆ.
ಹನುಮಂತ ಲಂಕಾ ಪ್ರವೇಶಕ್ಕೆ ಯತ್ನಿಸಿದ್ದಾಗ ರಾಕ್ಷಸಿಯರು ಆತನನ್ನು ತಡೆಯಲು ಯತ್ನಿಸಿದಂತೆ, ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ತಡೆಯಲು ಯತ್ನಿಸುತ್ತಿದ್ದಾರೆ ಎಂದು ಸುರೇಂದ್ರ ಸಿಂಗ್ ಹರಿಹಾಯ್ದಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಪ್ರಭು ಶ್ರೀರಾಮ ಎಂದಿರುವ ಸಿಂಗ್, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಯೋಗಿ ಆದಿತ್ಯನಾಥ್ ಅವರನ್ನು ಹನುಮಾನ ಎಂದು ಕರೆದಿದ್ದಾರೆ. ಇವರಿಬ್ಬರೂ ಸೇರಿ ಮಮತಾ ಅಚರಂತ ರಾಕ್ಷಸಿಯರನ್ನು ಸಂಹಾರ ಮಾಡಲಿದ್ದಾರೆ ಎಂದು ಬಿಜೆಪಿ ಶಾಸಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶ ಮಾಜಿ ಸಿಎಂ, ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಕಟುಕ ಎಂದಿರುವ ಸುರೇಂದ್ರ ಸಿಂಗ್, ತಮ್ಮ ಬೊಕ್ಕಸ ಹೇಗೆ ತುಂಬಿಸಿಕೊಳ್ಳಬೇಕು ಎಂದು ಅಖಿಲೇಶ್ ಗೆ ಚೆನ್ನಾಗಿ ಗೊತ್ತು ಎಂದು ಕಿಡಿಕಾರಿದ್ದಾರೆ.