ಕಾರ್ ರ್ಯಾಲಿಯಲ್ಲಿ ಅಪಘಾತ; ಶಾಸಕ ಮಾಲಕಯ್ಯ ಗುತ್ತೇದಾರ್ ಪುತ್ರ ಪ್ರಾಣಾಪಾಯದಿಂದ ಪಾರು
ರ್ಯಾಲಿಗಾಗಿಯೇ ಸಿದ್ಧವಾಗಿದ್ದ ಕಾರಿನಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ತಾಂತ್ರಿಕವಾಗಿ ಅಳವಡಿಸಲಾಗಿತ್ತು. ಹೀಗಾಗಿ, ಮಾಲೀಕಯ್ಯ ಗುತ್ತೇದಾರ್ ಪುತ್ರ ರಿತೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಡಿಕೇರಿ(ಏ. 24): ಕೊಡಗಿನ ಅಮ್ಮತ್ತಿಯಲ್ಲಿ ನಡೆದ ಕಾರ್ ರ್ಯಾಲಿಯಲ್ಲಿ ಅಪಘಾತಕ್ಕೊಳಗಾದ ಕಲಬುರ್ಗಿ ಶಾಸಕ ಮಾಲಕಯ್ಯ ಗುತ್ತೇದಾರ್ ಅವರ ಪುತ್ರ ರಿತೇಶ್ ಗುತ್ತೇದಾರ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಮೊನ್ನೆ ಏ.22ರಂದು ವಿಫೈವ್ ಸಂಸ್ಥೆ ಆಯೋಜಿಸಿದ್ದ ಕಾರ್ ರ್ಯಾಲಿ ವೇಳೆ ಈ ದುರ್ಘಟನೆ ಸಂಭವಿಸಿದೆ. ರ್ಯಾಲಿಯಲ್ಲಿ ಸ್ಪರ್ಧಿಯಾಗಿದ್ದ ರಿತೇಶ್ ತಮ್ಮ ಕಾರು ಚಲಾಯಿಸಿಕೊಂಡು ಶರವೇಗದಲ್ಲಿ ಬರುವಾಗ ಬಲಬದಿಯ ಎತ್ತರದ ಪ್ರದೇಶಕ್ಕೆ ಡಿಕ್ಕಿಯಾಗಿದೆ. ಸಿನಿಮಾ ಶೂಟಿಂಗ್ ವೇಳೆ ನಡೆಯುವಂತೆ ಕಾರು ಗಾಳಿಯಲ್ಲಿ ಮೂರ್ನಾಲ್ಕು ಬಾರಿ ಪಲ್ಟಿ ಹೊಡೆದಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನ ಮುಂಬದಿ ಮತ್ತು ಹಿಂಬದಿ ಗ್ಲಾಸ್'ಗಳು ಛಿದ್ರಗೊಂಡಿವೆ.
ಇಷ್ಟಾದರೂ ರಿತೇಶ್ ಅವರು ಕಾರಿನಿಂದ ನಗುನಗುತ್ತಲೇ ಹೊರಬಂದದ್ದು ಎಲ್ಲರಿಗೂ ನಿಟ್ಟುಸಿರು ಬಿಡುವಂತಾಯಿತು. ರ್ಯಾಲಿಗಾಗಿಯೇ ಸಿದ್ಧವಾಗಿದ್ದ ಕಾರಿನಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ತಾಂತ್ರಿಕವಾಗಿ ಅಳವಡಿಸಲಾಗಿತ್ತು. ಹೀಗಾಗಿ, ಮಾಲೀಕಯ್ಯ ಗುತ್ತೇದಾರ್ ಪುತ್ರ ರಿತೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಫ್ಜಲಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಾಲಿಕಯ್ಯ ಗುತ್ತೇದಾರ್ ಅವರ ಪುತ್ರ ರಿತೇಶ್ ವೃತ್ತಿಪರ ರ್ಯಾಲಿಪಟುವಾಗಿದ್ದಾರೆ. ಹಲವು ರಾಷ್ಟ್ರಮಟ್ಟದ ರ್ಯಾಲಿಗಳಲ್ಲಿ ಪಾಲ್ಗೊಂಡ ಅನುಭವಿ ಅವರಾಗಿದ್ದಾರೆ. ಅವರ ಈ ಅನುಭವ ಕೂಡ ಅವರ ಕೈಹಿಡಿದಿರಬಹುದು.
ವರದಿ: ಪ್ರಜ್ವಲ್ ಎನ್.ಸಿ., ಕೊಡಗು