ಯಲಹಂಕದಲ್ಲಿ ನಡೆಯುತ್ತಿರುವ ಏರ್ ಶೊ ಭಾರೀ ಅಗ್ನಿ ಅವಘಡದಲ್ಲಿ ಕಾರುಗಳು ಭಸ್ಮ ಫೆ.19ರಂದು ತಾಲೀಮಿನ ವೇಳೆಯೂ ಯುದ್ಧ ವಿಮಾನ ಡಿಕ್ಕಿಯಾಗಿ ಪೈಲಟ್ ಸಾವು

ಬೆಂಗಳೂರು : ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋ ಪ್ರದರ್ಶನದ ವೇಳೆ ಮತ್ತೊಂದು ಅವಘಡ ಸಂಭವಿಸಿದೆ.

ಫೆ.23, 24 ರಂದು ಸಾರ್ವಜನಿಕರಿಗೆ ವೈಮಾನಿಕ ಪ್ರದರ್ಶನ ನೋಡಲು ಅವಕಾಶ ಮಾಡಿಕೊಡಲಾಗಿತ್ತು. ಈ ಮಧ್ಯೆ ಸಾವಿರಾರು ವಾಹನಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡಲಾಗಿತ್ತು. ಸದ್ಯದ ಮಾಹಿತಿ ಪ್ರಕಾರ ಅವಘಡದಲ್ಲಿ 300 ಕ್ಕೂ ಹೆಚ್ಚು ಕಾರುಗಳು ಅಗ್ನಿಗಾಹುತಿಯಾಗಿವೆ. 

ಗೇಟ್ ನಂಬರ್ 5ರ ಬಳಿ ವಾಹನ ನಿಲುಗಡೆ ಮಾಡಿದ್ದ ಜಾಗದಲ್ಲಿ ಅಗ್ನಿ ಕಾಣಿಸಿಕೊಂಡಿದ್ದು ಸ್ಥಳಕ್ಕೆ 10 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿವೆ. ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. 

ಇನ್ನು ಬೆಂಕಿ ಅವಘಡ ಹಿನ್ನೆಲೆಯಲ್ಲಿ ಏರೋ ಇಂಡಿಯಾ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. 

ಫೆಬ್ರವರಿ 19ರಂದು ಯಲಹಂಕದ ವಾಯುನೆಲೆಯಲ್ಲಿ ತಾಲೀಮಿನಲ್ಲಿ ತೊಡಗಿದ್ದ ವೇಳೆ ಸೂರ್ಯ ಕಿರಣ ಯುದ್ಧ ವಿಮಾನದ ಪೈಲಟ್ ವಿಮಾನ ಡಿಕ್ಕಿಯಲ್ಲಿ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಏರೋ ಇಂಡಿಯಾ ಪಾರ್ಕಿಂಗ್ ಜಾಗದಲ್ಲಿ ಬೆಂಕಿ ಅವಘಡ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಫೆಬ್ರವರಿ 20 ರಿಂದ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ಆರಂಭವಾಗಿದ್ದು, 24ರವರೆಗೆ ನಡೆಯುತ್ತಿದೆ. ಲಕ್ಷಾಂತರ ಜನರು ಪ್ರದರ್ಶನ ವೀಕ್ಷಿಸಲು ಆಗಮಿಸಿದ್ದ ವೇಳೆಯೇ ಈ ದುರಂತವಾಗಿದೆ. 

Scroll to load tweet…