ಮುಳುಗಲಿವೆ ಈ ನಗರಗಳು : ಎಚ್ಚರ..!
ಕೇರಳದಲ್ಲಿ ಭಾರೀ ಮಳೆ ಸುರಿದು ಉಂಟಾದ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇದೇ ರೀತಿ ದುಸ್ಥಿತಿ ಈ ನಗರಗಳಿಗೂ ಎದುರಾಗಬಹುದು ಎನ್ನುವ ಎಚ್ಚರಿಕೆ ನೀಡಲಾಗಿದೆ.
ಮುಂಬೈ : ಕೇರಳದಲ್ಲಿ ಈ ಬಾರೀ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇದೀಗ ಮಹಾರಾಷ್ಟ್ರಕ್ಕೂ ಕೂಡ ಇದೇ ರೀತಿಯಾದ ಆತಂಕ ಎದುರಾಗಬಹುದಾಗಿದೆ. ಮಹಾರಾಷ್ಟ್ರದ ಅನೇಕ ನಗರಗಳೂ ಕೂಡ ಮುಳುಗುವ ಸ್ಥಿತಿಯಲ್ಲಿವೆ. ಒಂದು ವೇಳೆ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿದಲ್ಲಿ ಇಲ್ಲಿರುವ ಡ್ಯಾಂಗಳು ಅಪಾಯಕರ ಸ್ಥಿತಿಯಲ್ಲಿದ್ದು ಯಾವುದೇ ಸಂದರ್ಭದಲ್ಲಿ ಸಮಸ್ಯೆ ಎದುರಾಗಬಹುದು.
ಒಂದು ವೇಳೆ ಮತ್ತೆ ಮಳೆಯಾದರೆ 2005ರಲ್ಲಿ ಸಂಭವಿಸಿದ ಭೀಕರ ಪ್ರವಾಹ ಪರಿಸ್ಥಿತಿ ಮತ್ತೆ ತಲೆದೋರುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ಒಟ್ಟು 3264 ಡ್ಯಾಂಗಳಿದ್ದು ಮಳೆಯಾದರೆ ಮುಂಬೈ, ಥಾಣೆ, ನಂದೇಡ್ ನಗರಗಳು ಹೆಚ್ಚಿನ ಅಪಾಯವನ್ನು ಎದುರಿಸಲಿವೆ.
ಇಲ್ಲಿ ಪ್ರವಾಹವನ್ನು ಎದುರಿಸಲು ಯಾವುದೇ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಕಾರಣ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ನಿರಂತರವಾಗಿ ಮಳೆ ಸುರಿದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೆಲ್ಲಾ ಮನುಷ್ಯರೇ ಕಾರಣವಾಗಿರುತ್ತಾರೆ ಎಂದು ತಜ್ಞರ ಅಭಿಪ್ರಾಯವಾಗಿದೆ.
ಮಳೆಯನ್ನು ಎದುರಿಸಲು ಸೂಕ್ತ ಕ್ರಮ ಕೈಗೊಳ್ಳದೇ ಇರುವುದು. ಚರಂಡಿ ವ್ಯವಸ್ಥೆ ಸೂಕ್ತವಾಗಿಲ್ಲದೇ ಇರುವುದು. ತೆರೆದ ಪ್ರದೇಶಗಳಿರುವುದು ನೀರಿನಿಂದ ನಗರಗಳು ಮುಳುಗಲು ಕಾರಣವಾಗುತ್ತದೆ.