ಇನ್ನು ಕಂಡ್ ಕಂಡಲ್ಲಿ ಉಗಿದರೆ, ಬಹಿರ್ದೆಸೆ ಮಾಡಿದರೆ ದಂಡ ಕಟ್ಟಬೇಕು, ಹುಷಾರ್!
ಕಂಡ್ ಕಂಡಲ್ಲಿ ಉಗಿಯುವುದು, ತಂಬಿಗೆ ಹಿಡಿದು ಬಯಲಲ್ಲಿ ಶೌಚಕ್ಕೆ ಹೋಗುವುದಿನ್ನು ಅಕ್ಷಮ್ಯ ಅಪರಾಧ. ದೇಶವನ್ನು ಸ್ವಚ್ಛವಾಗಿಡಲು ಮಹಾರಾಷ್ಟ್ರ ಸರಕಾರ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದೆ.
ಮುಂಬೈ: ಕಂಡ್ ಕಂಡಲ್ಲಿ ಉಗಿಯುವುದು, ತಂಬಿಗೆ ಹಿಡಿದು ಬಯಲಲ್ಲಿ ಶೌಚಕ್ಕೆ ಹೋಗುವುದಿನ್ನು ಅಕ್ಷಮ್ಯ ಅಪರಾಧ. ದೇಶವನ್ನು ಸ್ವಚ್ಛವಾಗಿಡಲು ಮಹಾರಾಷ್ಟ್ರ ಸರಕಾರ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದ್ದು, ಇಂಥ ಕೃತ್ಯಕ್ಕೆ ಮುಂದಾಗುವವರ ವಿರುದ್ಧ ದಂಡ ವಿಧಿಸಲಿದೆ.
ಉಗಿಯುವುದು, ಕಸ ಎಸೆಯುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜಿಸುವವರ ವಿರುದ್ಧ ಸ್ಥಳದಲ್ಲಿಯೇ ದಂಡ ವಿಧಿಸಲು ಸರಕಾರ ಕಾನೂನು ರೂಪಿಸಿದ್ದು, ಈ ಅಧಿಕಾರವನ್ನು ನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳು ಹಾಗೂ ಘನ ತ್ಯಾಜ್ಯ ವಿಲೇವಾರಿ ಕಾಯ್ದೆಯಡಿಯಲ್ಲಿ ಕಾರ್ಯನಿರ್ವಹಿಸುವವರಿಗೆ ನೀಡಿದ್ದು, ತಕ್ಷಣವೇ ಜಾರಿಯಾಗುವಂತೆ ಈ ಕಾನೂನು ಜಾರಿಗೊಂಡಿದೆ.
ನಗರಾಭಿವೃದ್ಧಿ ಇಲಾಖೆ ಈ ಸರಕಾರಿ ಸುತ್ತೋಲೆ ಹೊರಡಿಸಿದ್ದು, ಸ್ಥಳದಲ್ಲಿಯೇ ಎ, ಬಿ, ಸಿ, ಡಿ ಎಂದು ವರ್ಗೀಕರಿಸಿ, ಸ್ಥಳದಲ್ಲಿಯೇ ದಂಡ ವಿಧಿಸಬಹುದಾಗಿದೆ. ರಸ್ತೆ, ರಾಷ್ಟ್ರೀಯ ಹೆದ್ದಾರಿ ಸೇರಿ ಕಂಡ್ ಕಂಡಲ್ಲಿ ಕಸ ಎಸೆದರೆ ಸ್ಥಳದಲ್ಲಿಯೇ 150 ರೂ.ನಿಂದ 180 ರೂ.ವರೆಗೆ ದಂಡ ವಿಧಿಸಲಾಗುವುದು. ಎಲ್ಲ ರೀತಿಯ ತ್ಯಾಜ್ಯ ಎಸೆಯುವವರ ಮೇಲೂ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸುವವರ ಮೇಲೆ 100 ರೂ. ನಿಂದ 200 ರೂ.ವರೆಗೆ, ಬಯಲಲ್ಲೇ ಮಲ ವಿಸರ್ಜಿಸುವವರಿಗೆ 500 ರೂ.ವರೆಗೂ ಈ ಕಾನೂನಿನ ಅಡಿಯಲ್ಲಿ ದಂಡ ವಿಧಿಸಲಾಗುವುದು.