ಹವಾಮಾನ ಇಲಾಖೆ ವಿರುದ್ಧ ಕೇಸ್ ದಾಖಲು
ಹವಾಮಾನ ಇಲಾಖೆ ವಿರುದ್ಧವೇ ರೈತರು ಪ್ರಕರಣ ದಾಖಲು ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಳೆಯ ಬಗ್ಗೆ ತಪ್ಪು ಮಾಹಿತಿ ನೀಡಿದೆ ಎಂದು ಪ್ರಕರಣ ದಾಖಲು ಮಾಡಲಾಗಿದೆ.
ಮುಂಬೈ: ತಪ್ಪು ಮಳೆ ಮುನ್ಸೂಚನೆ ನೀಡಿದುದಕ್ಕಾಗಿ ಇಲ್ಲೊಂದು ರೈತರ ಗುಂಪು ಹವಾಮಾನ ಇಲಾಖೆಯ ವಿರುದ್ಧವೇ ದೂರು ದಾಖಲಿಸಿದೆ. ಪುಣೆ ಮತ್ತು ಮುಂಬೈಯ ಹವಾಮಾನ ಇಲಾಖೆ ಅಧಿಕಾರಿಗಳು ಬೀಜ ಮತ್ತು ಕ್ರಿಮಿನಾಶಕ ಉತ್ಪಾದಕರೊಂದಿಗೆ ಕೈಜೋಡಿಸಿ ತಪ್ಪು ಮಾಹಿತಿ ನೀಡಿದ್ದಾರೆ.
ಇದರಿಂದಾಗಿ ಮಳೆಯನ್ನೇ ನಂಬಿ ಬಿತ್ತನೆ ಮಾಡುವ ರೈತರಿಗೆ ಲಕ್ಷಾಂತರ ರು. ನಷ್ಟವಾಗಿದೆ ಎಂದು ಸಂಸದ ರಾಜು ಶೆಟ್ಟಿ ನೇತೃತ್ವದ ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಮರಾಠವಾಡ ಪ್ರಾಂತ್ಯದ ಅಧ್ಯಕ್ಷ ಮಾಣಿಕ್ ಕದಂ ಎಂಬವರು ನೀಡಿರುವ ದೂರಿನಲ್ಲಿ ಆಪಾದಿಸಲಾಗಿದೆ.