3 ದಿನದಲ್ಲಿ ಮಹದಾಯಿ ಬಗ್ಗೆ ಮೋದಿ ಭರವಸೆ ನೀಡದಿದ್ದರೆ ಫೆ. 4 ಕ್ಕೆ ಬಂದ್ ನಿಶ್ಚಿತ
ಮಹದಾಯಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುವ ಬಗ್ಗೆ ಬಿಜೆಪಿಯವರು ಫೆ.3 ರೊಳಗೆ ಭರವಸೆ ನೀಡದಿದ್ದರೆ ಫೆ. 4 ರಂದು ಬೆಂಗಳೂರು ಬಂದ್ ನಡೆಸಲಾಗುವುದು ಎಂದು ಕನ್ನಡ ಒಕ್ಕೂಟ ಸ್ಪಷ್ಟಪಡಿಸಿದೆ.
ಬೆಂಗಳೂರು (ಫೆ.01): ಮಹದಾಯಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುವ ಬಗ್ಗೆ ಬಿಜೆಪಿಯವರು ಫೆ.3 ರೊಳಗೆ ಭರವಸೆ ನೀಡದಿದ್ದರೆ ಫೆ. 4 ರಂದು ಬೆಂಗಳೂರು ಬಂದ್ ನಡೆಸಲಾಗುವುದು ಎಂದು ಕನ್ನಡ ಒಕ್ಕೂಟ ಸ್ಪಷ್ಟಪಡಿಸಿದೆ.
ಮಹದಾಯಿ ಹೋರಾಟಗಾರರ ವಿಚಾರವನ್ನು ಪ್ರಧಾನಿಗೆ ಮುಟ್ಟಿಸಲೇಬೇಕು. ಇಲ್ಲವಾದಲ್ಲಿ ಕಳೆದ 3 ವರ್ಷಗಳ ನಿರಂತರ ಹೋರಾಟಕ್ಕೆ ಬೆಲೆ ಇಲ್ಲದಂತಾ ಗುತ್ತದೆ. ಫೆ.4 ರಂದು ಪರಿವರ್ತನಾ ಯಾತ್ರೆ ಸಮಾರೋಪದ ವೇಳೆ ಪ್ರಧಾನಿ ಈ ಬಗ್ಗೆ ಮಾತನಾಡಲಿದ್ದಾರೆ ಎಂಬ ಭರವಸೆ ನೀಡಿದರೆ ಮಾತ್ರ ಹೋರಾಟದಿಂದ ಹಿಂದೆ ಸರಿಯಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
ಉತ್ತರ ಕರ್ನಾಟಕದ ಜನರ ಹಿತದೃಷ್ಟಿಯಿಂದ ನಡೆಸಿರುವ ಹೋರಾಟಕ್ಕೆ ಬೆಲೆ ಸಿಗಬೇಕಾದರೆ, ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಬೇಕು. ಜ.25 ರ ಬಂದ್ ಯಶಸ್ವಿಯಾಗಿದ್ದು, ಫೆ.೪ರಂದೂ ಬಂದ್ ನಡೆಯಲಿದೆ. ರಾಜ್ಯದ ಹಿತಕ್ಕಾಗಿ ನಿರಂತರವಾಗಿ ಹೋರಾಟ ನಡೆಯಲಿದೆ ಎಂದರು.
ಭಾನುವಾರ ಬಂದ್ ಆಚರಣೆಗೆ ಸರ್ಕಾರ ಅನುಮತಿ ನೀಡಿಲ್ಲ. ಹೋರಾಟಗಾರರು ಬೇಕಿದ್ದರೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡುವಂತೆ ಸೂಚಿಸಿದ್ದೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಈ ಬಂದ್ ಕರೆಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಆದರೂ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದೆ. ನರೇಂದ್ರ ಮೋದಿ ಬಿಜೆಪಿಯವರಿಗೆ ಮಾತ್ರ ಪ್ರಧಾನಿ ಅಲ್ಲ. ನಮಗೂ ಪ್ರಧಾನಿಗಳೇ ಎಂದು ಅವರು ಹೇಳಿದ್ದಾರೆ.