ರಾಜ್ಯ ಬಿಜೆಪಿ ಕಚೇರಿ ಮುಂದೆ ಮಹದಾಯಿ ರೈತರ ಅಹೋರಾತ್ರಿ ಧರಣಿ ಎರಡನೇ ದಿನವೂ ಮುಂದುವರಿದಿದೆ. ಉತ್ತರ ಕರ್ನಾಟಕ ಭಾಗದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರವಾಸದಲ್ಲಿದ್ದರೂ ನೂರಾರು ರೈತರು ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಒಂದೆಡೆ ಬಿಜೆಪಿ ಕಚೇರಿ ಬದಲಾಗಿ ಸಿಎಂ ನಿವಾಸದ ಎದುರು ಪ್ರತಿಭಟನೆ ನಡೆಸುವಂತೆ ರೈತರಿಗೆ ಯಡಿಯೂರಪ್ಪ ಸಲಹೆ ಕೊಟ್ಟಿದ್ದರೆ, ಮತ್ತೊಂದೆಡೆ ಹೋರಾಟಗಾರರಿಗೆ ಸಾರ್ವಜನಿಕರಿಂದ ನೆರವು, ಸಂಘಟನೆಗಳ ಬೆಂಬಲ ವ್ಯಕ್ತವಾಗತೊಡಗಿದೆ.

ಬೆಂಗಳೂರು (ಡಿ.24): ರಾಜ್ಯ ಬಿಜೆಪಿ ಕಚೇರಿ ಮುಂದೆ ಮಹದಾಯಿ ರೈತರ ಅಹೋರಾತ್ರಿ ಧರಣಿ ಎರಡನೇ ದಿನವೂ ಮುಂದುವರಿದಿದೆ. ಉತ್ತರ ಕರ್ನಾಟಕ ಭಾಗದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರವಾಸದಲ್ಲಿದ್ದರೂ ನೂರಾರು ರೈತರು ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಒಂದೆಡೆ ಬಿಜೆಪಿ ಕಚೇರಿ ಬದಲಾಗಿ ಸಿಎಂ ನಿವಾಸದ ಎದುರು ಪ್ರತಿಭಟನೆ ನಡೆಸುವಂತೆ ರೈತರಿಗೆ ಯಡಿಯೂರಪ್ಪ ಸಲಹೆ ಕೊಟ್ಟಿದ್ದರೆ, ಮತ್ತೊಂದೆಡೆ ಹೋರಾಟಗಾರರಿಗೆ ಸಾರ್ವಜನಿಕರಿಂದ ನೆರವು, ಸಂಘಟನೆಗಳ ಬೆಂಬಲ ವ್ಯಕ್ತವಾಗತೊಡಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರಡು ದಿನಗಳಿಂದ ಪ್ರತಿಭಟನೆ ಕುಳಿತಿರುವ ರೈತರು ಕಳೆದ ರಾತ್ರಿ ರಸ್ತೆ ಬದಿಯಲ್ಲೇ ಮಲಗಿ ಕೊರೆಯುವ ಚಳಿಯಲ್ಲಿ ಒಂದು ರಾತ್ರಿ ಕಳೆದಿದ್ದಾರೆ. ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬರುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರೆ, ವಿಭಿನ್ನ ಸನ್ನಿವೇಶದಲ್ಲಿ ಯಡಿಯೂರಪ್ಪ ಉತ್ತರ ಕರ್ನಾಟಕ ಭಾಗದಲ್ಲೇ ಪರಿವರ್ತನಾ ಯಾತ್ರೆಯಲ್ಲಿ ತೊಡಗಿದ್ದಾರೆ. ಅಲ್ಲೇ ಸುಲಭವಾಗಿ ಭೇಟಿಯಾಗುವ ಅವಕಾಶ ಇದ್ದರೂ ಬೆಂಗಳೂರಿಗೆ ಬಂದು ಹೋರಾಟಗಾರರು ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಮತ್ತೊಂದೆಡೆ ಇಂದು ಬೆಳಗ್ಗೆ ರಾಜ್ಯ ಬಿಜೆಪಿ ಕಚೇರಿ ‌ಮುಂದೆಯೇ ರಸ್ತೆ ಬದಿ ಟ್ಯಾಂಕರ್ ನೀರಿನಲ್ಲಿ ಸ್ನಾನ ಹಾಗೂ ಬಟ್ಟೆ ತೊಳೆದು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಇದಲ್ಲದೇ ಜೆಡಿಯು ಮಾಜಿ ರಾಜ್ಯಾಧ್ಯಕ್ಷ ಡಾ. ಎಂ.ಪಿ. ನಾಡಗೌಡ, ಧಾರವಾಡದ ಮಣಸೂರು ಮಣಸೂರು ಮಠದ ಬಸವರಾಜ ಸ್ವಾಮೀಜಿ, ಹಾಗೂ ಜನಸಾಮಾನ್ಯರ ವೇದಿಕೆ ಅಧ್ಯಕ್ಷ ಅಯ್ಯಪ್ಪ, ಜಯಕರ್ನಾಟಕ, ಯುವ ಘರ್ಜನೆ, ಆಮ್ ಆದ್ಮಿ ಪಾರ್ಟಿ ಸೇರಿಂದಂತೆ ಹಲವರಿಂದ ಬೆಂಬಲ ವ್ಯಕ್ತವಾಗಿದೆ. ಅದೇ ರೀತಿ ಸಾರ್ವಜನಿಕರಿಂದ ಹೋರಾಟಗಾರರಿಗೆ ಊಟ, ತಿಂಡಿ, ಹೊದಿಕೆ ಹೀಗೆ ವಿವಿಧ ರೀತಿಯಲ್ಲಿ ನೆರವು ಕೂಡಾ ಹರಿದುಬಂದಿದೆ.

ಎರಡು ದಿನಗಳಿಂದ ಮಹಿಳೆಯರು‌ ಮತ್ತು‌ ಮಕ್ಕಳೊಡನೆ ರಸ್ತೆ ಬದಿ ಹೋರಾಟ ಮುಂದುವರಿದಿದ್ದರೂ ರಾಜ್ಯ ಸರ್ಕಾರದ ಕಡೆಯಿಂದಾಗಲಿ , ರಾಜ್ಯ ಬಿಜೆಪಿ ಕಡೆಯಿಂದಾಗಲಿ ಯಾರೊಬ್ಬರೂ ಪ್ರತಿಭಟನಾ ನಿರತರ ಬಳಿ ಬಂದು ಮಾತನಾಡುವ ಔದಾರ್ಯ ತೋರಿಲ್ಲ.