ಟೋಲ್ಗಳಲ್ಲಿ ಹೊಸ ನಿಯಮ : ಹೈಕೋರ್ಟ್ ಆದೇಶ
ಟೋಲ್ ಗಳಲ್ಲಿ ಹೊಸ ನಿಯಮವೊಂದು ಜಾರಿಯಾಗುತ್ತಿದೆ. ಟೋಲ್ ಗಳಲ್ಲಿ ಓಡಾಡುವ ನ್ಯಾಯಧೀಶರು ಹಾಗು ವಿಐಪಿಗಳಿಗೆ ಪ್ರತ್ಯೇಕ ಮಾರ್ಗ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮದ್ರಾಸ್ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.
ಚೆನ್ನೈ: ಹಾಲಿ ನ್ಯಾಯಾಧೀಶರು ಸೇರಿದಂತೆ ದೇಶದ ಗಣ್ಯಾತಿಗಣ್ಯ ವ್ಯಕ್ತಿಗಳ ವಾಹನಗಳ ಓಡಾಟಕ್ಕೆ ಟೋಲ್ ಪ್ಲಾಜಾಗಳಲ್ಲಿ ಪ್ರತ್ಯೇಕ ಮಾರ್ಗ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮದ್ರಾಸ್ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.
‘ವಿಐಪಿಗಳು ಹಾಗೂ ಹಾಲಿ ನ್ಯಾಯಾಧೀಶರ ವಾಹನಗಳನ್ನು ಟೋಲ್ ಪ್ಲಾಜಾಗಳಲ್ಲಿ ತಡೆದು ನಿಲ್ಲಿಸುತ್ತಿರುವುದು ಬೇಸರ ಉಂಟು ಮಾಡುತ್ತಿದೆ. ಹಾಲಿ ನ್ಯಾಯಾಧೀಶರು ಟೋಲ್ಗಳಲ್ಲಿ ಸುಂಕ ಪಾವತಿಸಲು 10ರಿಂದ 15 ನಿಮಿಷ ಕಾಯಬೇಕಾಗಿರುವುದು ದುರದೃಷ್ಟಕರ’ ಎಂದು ನ್ಯಾಯಮೂರ್ತಿಗಳಾದ ಹುಲುವಾಡಿ ಜಿ. ರಮೇಶ್ ಹಾಗೂ ಎಂ.ವಿ. ಮುರಳೀಧರನ್ ಅವರಿದ್ದ ಪೀಠ ಹೇಳಿದೆ.
ವಿಐಪಿಗಳು ಹಾಗೂ ಹಾಲಿ ನ್ಯಾಯಾಧೀಶರ ವಾಹನಗಳು ಯಾವುದೇ ತೊಂದರೆ ಇಲ್ಲದಂತೆ ಟೋಲ್ ಪ್ಲಾಜಾಗಳನ್ನು ದಾಟುವುದಕ್ಕೆ ಅನುವು ಮಾಡಿಕೊಡಲು ಪ್ರತ್ಯೇಕ ಮಾರ್ಗ ರೂಪಿಸುವಂತೆ ಎಲ್ಲ ಟೋಲ್ ಪ್ಲಾಜಾಗಳಿಗೂ ಸುತ್ತೋಲೆ ಹೊರಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್ಎಚ್ಎಐ)ಕ್ಕೆ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ.ಒಂದು ವೇಳೆ ತನ್ನ ಈ ಆದೇಶ ಉಲ್ಲಂಘಿಸಿ ಮಧ್ಯಂತರ ಆದೇಶ ಹೊರಡಿಸದೇ ಇದ್ದಲ್ಲಿ ಶೋಕಾಸ್ ನೋಟಿಸ್ ಜಾರಿಗೊಳಿಸಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದೆ.
ಟೀಕೆ: ಈ ನಡುವೆ, ವಿವಿಐಪಿ ಸಂಸ್ಕೃತಿಯ ವಿರುದ್ಧ ಇಂದು ಎಲ್ಲೆಡೆ ಆಂದೋಲನ ನಡೆಯುತ್ತಿರುವಾಗ ನ್ಯಾಯಾಲಯವು ವಿಐಪಿ ಸಂಸ್ಕೃತಿ ಪೋಷಿರುವ ಆದೇಶ ನೀಡಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.