ಕೇರಳದಂತೆ ಗೋವಾಕ್ಕೂ ಕಾದಿದೆ ಕಂಟಕ
- ಪರಿಸರ ರಕ್ಷಣೆಗೆ ಕ್ರಮ ಕೈಗೊಳ್ಳದಿದ್ದರೆ ಭಾರೀ ಹಾನಿ: ಮಾಧವ್ ಗಾಡ್ಗೀಳ್ ಎಚ್ಚರಿಕೆ
- ಪ್ರವಾಹ ಉಂಟಾದರೆ ಕೇರಳ ರೀತಿ ಭಾರೀ ಸಮಸ್ಯೆಗೆ ಸಿಲುಕಲಿದೆ ಗೋವಾ
ಪಣಜಿ (ಆ. 20): ಒಂದು ವೇಳೆ ಪರಿಸರ ರಕ್ಷಣೆಗೆ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ಪ್ರವಾಹದಿಂದ ನಲುಗಿರುವ ಕೇರಳದ ಸ್ಥಿತಿಯೇ ಗೋವಾಕ್ಕೂ ಬಂದೊದಗಲಿದೆ ಎಂದು ಖ್ಯಾತ ಪರಿಸರ ತಜ್ಞ ಮಾಧವ್ ಗಾಡ್ಗೀಳ್ ಎಚ್ಚರಿಕೆ ನೀಡಿದ್ದಾರೆ.
ಇತರ ರಾಜ್ಯಗಳಂತೆ ಗೋವಾದಲ್ಲೂ ಅನಿಯಮಿತ ಲಾಭಕ್ಕಾಗಿ ಪರಿಸರ ನಾಶ ಮಾಡಲಾಗುತ್ತಿದೆ. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳಲ್ಲಿ ಎಲ್ಲ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಗೋವಾದಲ್ಲಿ ಕೇರಳದಲ್ಲಿ ಇದ್ದಷ್ಟು ಪಶ್ಚಿಮ ಘಟ್ಟ ಪ್ರದೇಶಗಳು ಇಲ್ಲದೇ ಇದ್ದರೂ ಗೋವಾದಲ್ಲಿ ಮಳೆಯಿಂದ ಅಪಾರ ಹಾನಿ ಸಂಭವಿಸಲಿದೆ. ನ್ಯಾ. ಎಂ.ಬಿ. ಶಾ ಅವರ ಆಯೋಗ ಗೋವಾದಲ್ಲಿ 35,000 ಕೋಟಿ ರು. ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ತಿಳಿಸಿದೆ ಎಂದು ಗಾಡ್ಗೀಳ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲ ವರ್ಷಗಳಹಿಂದೆ ಪಶ್ಚಿಮ ಘಟ್ಟಗಳ ಅಧ್ಯಯನಕ್ಕೆ ಸರ್ಕಾರ ನೇಮಿಸಿದ್ದ ಸಮಿತಿಯ ನೇತೃತ್ವವನ್ನು ಗಾಡ್ಗೀಳ್ ವಹಿಸಿದ್ದರು. ಅವರು ನೀಡಿದ್ದ ವರದಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಗೋವಾದಲ್ಲಿ ಲಾಭದ ಉದ್ದೇಶಕ್ಕಾಗಿ ಪರಿಸರಕ್ಕೆ ವ್ಯಾಪಕ ಹಾನಿ ಉಂಟು ಮಾಡಲಾಗಿದೆ. ಗಣಿಗಾರಿಕೆಗೆ ಸರ್ಕಾರವೇ ಕುಮ್ಮಕ್ಕು ನೀಡಿದೆ. ಒಂದು ವೇಳೆ ಪರಿಸರ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇದ್ದರ ಮುಂದೊಂದು ದಿನ ಈಗ ಕೇರಳದಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿ ಗೋವಾದಲ್ಲೂ ಸಂಭವಿಸಿದರೆ ಅಚ್ಚರಿ ಇಲ್ಲ ಎಂದು ಹೇಳಿದ್ದಾರೆ.