ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಂದೆ ಇರುವ ಬೃಹತ್ ಸವಾಲು ಏನು..?
ಕೆಪಿಸಿಸಿಗೆ ನೂತನ ಸಾರಥಿಯಾಗಿ ದಿನೇಶ್ ಗುಂಡೂರಾವ್ ಅವರು ಆಯ್ಕೆಯಾಗಿದ್ದಾರೆ. ಇದೀಗ ಅವರು ತಮ್ಮ ಮುಂದೆ ಇರುವ ಸವಾಲು ಏನು ಎನ್ನುವುದನ್ನು ಅವರು ಹೇಳಿದ್ದಾರೆ.
ಚಿಕ್ಕಮಗಳೂರು : ಮುಂಬರುವ ಲೋಕಸಭಾ ಚುನಾವಣೆಯೇ ತಮ್ಮ ಹಾಗೂ ನೂತನ ಕಾರ್ಯಾಧ್ಯಕ್ಷರಾಗಿರುವ ಈಶ್ವರ ಖಂಡ್ರೆಯವರ ಮುಂದಿರುವ ದೊಡ್ಡ ಸವಾಲು ಎಂದು ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ತಮ್ಮ ಪತ್ನಿ ಟಬು ರಾವ್ ಅವರ ಹುಟ್ಟುಹಬ್ಬದ ಅಂಗವಾಗಿ ಕುಟುಂಬದ ಸಮೇತರಾಗಿ ಬೆಳಗ್ಗೆ ಶೃಂಗೇರಿಗೆ ಆಗಮಿಸಿದ್ದ ಅವರು ಶಾರದಾಂಬೆಯ ದರ್ಶನ, ಶೃಂಗೇರಿ ಪೀಠದ ಭಾರತೀ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದು ಚಿಕ್ಕಮಗಳೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುವ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಶೃಂಗೇರಿಯಲ್ಲಿ ದೇವರ ಹಾಗೂ ಗುರುಗಳ ದರ್ಶನ ಪಡೆದು ಹೊರಗೆ ಬರುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರ ಹುದ್ದೆ ನೀಡಲಾಗಿದೆ ಎಂಬ ಮಾಹಿತಿ ಸಿಕ್ಕಿತು. ಪಕ್ಷದ ನಾಯಕರ, ಜನರ ಜತೆಗೆ ದೈವ ಬಲವೂ ಇದೆ ಎಂಬುದು ಇದರಲ್ಲೇ ಗೊತ್ತಾಗುತ್ತದೆ ಎಂದು ಹೇಳಿದರು.
ನನ್ನ ಮೇಲೆ ನಂಬಿಕೆಯನ್ನಿಟ್ಟು ಪಕ್ಷದ ವರಿಷ್ಠ ರಾಹುಲ್ ಗಾಂಧಿ ಮತ್ತು ರಾಜ್ಯದ ಪ್ರಮುಖ ನಾಯಕರು ಜವಾಬ್ದಾರಿ ನೀಡಿದ್ದಾರೆ. ಇದರಿಂದ ಸಂತೋಷವಾಗಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನನ್ನ ಮತ್ತು ಈಶ್ವರ ಖಂಡ್ರೆ ಅವರ ಮೇಲೆ ನಂಬಿಕೆ ಇಟ್ಟು ಮಹತ್ವದ ಜವಾಬ್ದಾರಿಗಳನ್ನು ನೀಡಿದ್ದಾರೆ. ಪಕ್ಷದ ಎಲ್ಲರ ಸಹಕಾರದಿಂದ ನಿಭಾಯಿಸಿಕೊಂಡು ಹೋಗುತ್ತೇನೆಂಬ ವಿಶ್ವಾಸ ಇದೆ ಎಂದರು.