ಹೊಸ ವರ್ಷಾಚರಣೆ; MG ರೋಡ್'ನಲ್ಲಿನ ಪಬ್ & ಬಾರ್ ಕ್ಲೋಸ್..?
ನಗರದ ಪೂರ್ವ ಹಾಗೂ ಪಶ್ಚಿಮ ವಲಯದ ಅಧಿಕಾರಿಗಳಾದ ಬಸವಣ್ಣ ಹಾಗೂ ರವಿಶಂಕರ್ ನೇತೃತ್ವದಲ್ಲಿ ಎಂ.ಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯ ಬಾರ್& ಪಬ್'ಗಳ ಮೇಲೆ ದಾಳಿ ನಡೆಸಿದ್ದಾರೆ.
ಬೆಂಗಳೂರು(ಡಿ.30): ಮುಂಬೈ'ನ ಬಾರ್ ಅಂಡ್ ರೆಸ್ಟೊರೆಂಟ್'ನಲ್ಲಿ ಅಗ್ನಿ ಅವಘಡ ಸಂಭವಿಸಿದ ಹಿನ್ನಲೆಯಲ್ಲಿ, ನಗರದ ಅಗ್ನಿಶಾಮಕ ಅಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದು, ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮುಂಜಾಗ್ರತೆ ಕ್ರಮ ಕೈಗೊಂಡಿರದ ಬಾರ್'ಗಳು, ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಹೊಸವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಅಗ್ನಿಶಾಮಕ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ನಗರದ ಪೂರ್ವ ಹಾಗೂ ಪಶ್ಚಿಮ ವಲಯದ ಅಧಿಕಾರಿಗಳಾದ ಬಸವಣ್ಣ ಹಾಗೂ ರವಿಶಂಕರ್ ನೇತೃತ್ವದಲ್ಲಿ ಎಂ.ಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯ ಬಾರ್& ಪಬ್'ಗಳ ಮೇಲೆ ದಾಳಿ ನಡೆಸಿದ್ದಾರೆ. ಬಾರ್ & ರೆಸ್ಟೋರೆಂಟ್'ಗಳಲ್ಲಿ ಲಿಫ್ಟ್, ಸ್ಟೇರ್ ಕೇಸ್ ಮುಂತಾದೆಡೆ ಅಗ್ನಿ ನಂದಕಗಳನ್ನು ಅಳವಡಿಸಲಾಗಿದೆಯೇ ಇಲ್ಲವೇ ಎಂಬ ಕುರಿತಂತೆ ದಾಳಿ ನಡೆಸಲಾಗಿದ್ದು, ನಿಯಮ ಉಲ್ಲಂಘಿಸಿದ ಬಾರ್ & ರೆಸ್ಟೋರೆಂಟ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಇಂದು ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯ ವರದಿಯನ್ನು ಆಧರಿಸಿ ನಾಳೆ ಕ್ರಮ ಜರುಗಿಸಲು ಅಧಿಕಾರಿಗಳು ಸಿದ್ದತೆ ನಡೆಸುತ್ತಿದ್ದಾರೆ.