ಸ್ವತಂತ್ರ ಲಿಂಗಾಯತ ಧರ್ಮ: ಪ್ರಧಾನಿಯತ್ತ ಮಠಾಧೀಶರ ನಿಯೋಗ..!
ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ
ಪ್ರಧಾನಿ ಬಳಿ ಮಠಾಧೀಶರ ನಿಯೋಗ
ಮೋದಿ ಭೇಟಿ ಮಾಡಲಿರುವ ೩೦ಕ್ಕೂ ಹೆಚ್ಚು ಮಠಾಧೀಶರ ನಿಯೋಗ
ಎಂ.ಬಿ ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ
ತಪ್ಪು ಸರಿಪಡಿಸಿಕೊಳ್ಳಲು ಕಾಂಗ್ರೆಸ್ ಗೆ ಒತ್ತಾಯ
ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಎಚ್ಚರಿಕೆ
ಬೀದರ್(ಜೂ.13): ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಆಗ್ರಹಿಸಿ 30ಕ್ಕೂ ಹೆಚ್ಚು ಮಠಾಧೀಶರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಆಗ್ರಹಿಸಿ 30 ಕ್ಕೂ ಹೆಚ್ಚು ಮಠಾಧೀಶರು ಪ್ರಧಾನಿ ಅವರ ಬಳಿ ನಿಯೋಗ ಕೊಂಡೊಯ್ಯಲಿದ್ದು, ಲಿಂಗಾಯತ ಪ್ರತ್ಯೇಕ ಧರ್ಮದ ಅಗತ್ಯತೆಯನ್ನು ಮನವರಿಕೆ ಮಾಡಿಕೊಡಲಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಸಮ್ಮಿಶ್ರ ಸರ್ಕಾರದಲ್ಲಿ ಎಂ.ಬಿ. ಪಾಟೀಲ್ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಲಿಂಗಾಯತ ಸಮನ್ವಯ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿಂದೆ ವಿರೇಂದ್ರ ಪಾಟೀಲರಿಗೆ ಅನ್ಯಾಯ ಮಾಡಿದಂತೆ ಎಂ.ಬಿ.ಪಾಟೀಲ್ ಅವರಿಗೂ ಕಾಂಗ್ರೆಸ್ ಅನ್ನಾಯ ಮಾಡುತ್ತಿದ್ದು, ಆದಷ್ಟು ಬೇಗ ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಸಚಿವರಾಗಿ ಸಮರ್ಥ ಆಡಳಿತ ನೀಡಿದ್ದ ಎಂ.ಬಿ. ಪಾಟೀಲ್ ಅವರನ್ನು ಲಿಂಗಾಯತ ಹೋರಾಟದ ಕಾರಣಕ್ಕೆ ಮೂಲೆಗುಂಪು ಮಾಡಲಾಗುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್ ಈ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಎಂದು ಮಠಾಧೀಶರು ಆಗ್ರಹಿಸಿದರು.