ಲಿಂಗಾಯತ ಪ್ರತ್ಯೇಕ ಧರ್ಮದ ರಾಜಕೀಯ ಡೊಂಬರಾಟ
ರಾಜ್ಯದಲ್ಲಿ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಈಗ ರಾಜಕೀಯ ಡೊಂಬರ ಆಟವಾಗಿದೆ, ಮುಂದಿನ ವಿಧಾನಸಭಾ ಚುನಾವಣೆಯ ಹಿನ್ನಲೇ ಎಲ್ಲಾ ರಾಜಕೀಯ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಕೆಸರ ಎರಚುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ.
ಬೆಂಗಳೂರು(ಜುಲೈ 26): ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಧರ್ಮಯುದ್ಧ ಆರಂಭವಾಗಿದೆ. ಲಿಂಗಾಯತರು ನಮಗೆ ಪ್ರತ್ಯೇಕ ಧರ್ಮ ಬೇಕು ಎಂದು ಪಟ್ಟು ಹಿಡಿದಿರುವುದೇ ಇದಕ್ಕೆ ಕಾರಣವಾಗಿದ್ದು, ಇದನ್ನೆ ಮುಂದಿನ ಚುನಾವಣೆಯ ದಾಳವಾಗಿರಿಸಿಕೊಂಡಿರುವ ಎಲ್ಲ ಪಕ್ಷಗಳು ರಾಜಕೀಯದ ಗೇಮ್ ಪ್ಲೇ ಮಾಡುತ್ತಾ ಇವೆ.
ಧರ್ಮಯುದ್ಧದ ಸಂಪೂರ್ಣ ಲಾಭ ಪಡೆಯಲು ಮುಂದಾಗಿರುವ ಕಾಂಗ್ರೆಸ್, ತಾವು ಬಸವಣ್ಣನ ಆಶಯಗಳನ್ನು ಪಾಲಿಸುತ್ತೇವೆ, ಕಾಂಗ್ರೆಸ್ ಲಿಂಗಾಯತರ ಪರ ಇರಲಿದೆ. ಆರೆಸ್ಸೆಸ್ ಎಂದೂ ಲಿಂಗಾಯತರ ಪರವಾಗಿಲ್ಲ. ಹೀಗಾಗೇ ಯಡಿಯೂರಪ್ಪ ಅವರಿಗೆ ಏನೂ ಮಾಡೋದಕ್ಕೆ ಆಗಲ್ಲ ಎಂದು ಗಣಿ ಸಚಿವ ವಿನಯ್ ಕುಲಕರ್ಣಿ ಟೀಕಿಸುವ ಮೂಲಕ ಬಿಜೆಪಿಯ ಪ್ರಬಲ ವೋಟ್ ಬ್ಯಾಂಕ್ ಆಗಿರುವ ಲಿಂಗಾಯತರ ಮತಗಳನ್ನು ಒಡೆಯುವ ಅಸ್ತ್ರ ಪ್ರಯೋಗಿಸಿದ್ದಾರೆ.
ಯಡಿಯೂರಪ್ಪ ಆರೆಸ್ಸೆಸ್ ಕಪಿಮುಷ್ಟಿಯಲ್ಲಿರೋ ಕಾರಣದಿಂದಾಗಿ ಲಿಂಗಾಯತ ಪರವಾಗಿ ಮಾತನಾಡುತ್ತಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಕೂಡ ಟೀಕಿಸಿದ್ದಾರೆ.
ವೀರಶೈವ-ಲಿಂಗಾಯತ ಸ್ವತಂತ್ರ ಧರ್ಮ ಯುದ್ಧದಲ್ಲಿ ಕಾಂಗ್ರೆಸ್ ಆರೆಸ್ಸೆಸ್'ಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟಲು ಹೊರಟಿದೆ. ಆದ್ರೆ ಬಿಜೆಪಿ ಮಾತ್ರ ತುಟಿ ಪಿಟಕ್ ಎನ್ನದೇ ಸೈಲೆಂಟಾಗಿದೆ..
ಇದೇ ವೇಳೆ, ಪ್ರತ್ಯೇಕ ಧರ್ಮಕ್ಕೆ ನನ್ನ ವಿರೋಧವಿದೆ ಎನ್ನುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ತಮ್ಮ ಪಕ್ಷದ ನಿಲುವು ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕಾರಣಿಗಳ ಧರ್ಮರಾಜಕೀಯ ಚುರುಕುಗೊಂಡಿದೆ. ಆದ್ರೆ, ಇದಕ್ಕೆ ಆಯಾ ಧರ್ಮ ಗುರುಗಳ ನಿಲುವೇನು? ಕಾನೂನು ಏನ್ ಹೇಳುತ್ತೆ? ಅನ್ನೋ ಕುತೂಹಲಗಳು ಹುಟ್ಟಿಕೊಂಡಿವೆ.