2018ನೇ ಇಸ್ವಿ ಭಾರತೀಯ ಭದ್ರತಾ ಪಡೆಗಳಿಗೆ ಕಠಿಣವಾಗಿರಲಿದೆ ಎಂದು  ಪಾಕಿಸ್ತಾನ ಮೂಲದ ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆ  ಎಚ್ಚರಿಕೆಯನ್ನೂ ನೀಡಿದೆ.

ನವದೆಹಲಿ: ರಾಜ್ಯಪಾಲರ ಆಳ್ವಿಕೆ ಹೇರಿಕೆಯಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಿರುವ ಸಂದರ್ಭದಲ್ಲೇ, ಮುಂಬೈ ಮೇಲೆ 10 ವರ್ಷಗಳ ಹಿಂದೆ ದಾಳಿ ನಡೆಸಿದ್ದ, ಕಾಶ್ಮೀರದಲ್ಲೂ ಭಾರಿ ಉಪಟಳ ನೀಡುತ್ತಿರುವ ಪಾಕಿಸ್ತಾನ ಮೂಲದ ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆ ಆನ್‌ಲೈನ್‌ ನಿಯತಕಾಲಿಕೆಯೊಂದನ್ನು ಹೊರತಂದಿದೆ. 2018ನೇ ಇಸ್ವಿ ಭಾರತೀಯ ಭದ್ರತಾ ಪಡೆಗಳಿಗೆ ಕಠಿಣವಾಗಿರಲಿದೆ ಎಂದು ಎಚ್ಚರಿಕೆಯನ್ನೂ ನೀಡಿದೆ.

Add Asianetnews Kannada as a Preferred SourcegooglePreferred

ವ್ಯೇತ್‌ ಎಂಬ ಹೆಸರಿನ ಕಾಶ್ಮೀರ ಕೇಂದ್ರಿತ ನಿಯತಕಾಲಿಕೆ ಇದಾಗಿದ್ದು, ಕಾಶ್ಮೀರದಲ್ಲಿರುವ ಜನಸಾಮಾನ್ಯರಿಗೆ ನೆರವಾಗುತ್ತಿರುವುದಾಗಿ ಲಷ್ಕರ್‌ ಸಂಘಟನೆ ಇದರಲ್ಲಿ ಹೇಳಿಕೊಂಡಿದೆ. 2017ರಲ್ಲಿ ತಾನು ನಡೆಸಿದ ದಾಳಿಗಳನ್ನು ಈ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ ತನ್ನ ಸಂಘಟನೆಯ ವಕ್ತಾರ ಡಾ. ಅಬ್ದುಲ್ಲಾ ಗಜ್ನವಿ ಎಂಬಾತನ ಸಂದರ್ಶನವನ್ನೂ ಪ್ರಕಟಿಸಲಾಗಿದೆ.

ಲಷ್ಕರ್‌ ಸಂಘಟನೆ ಸ್ಥಳೀಯ ಹುಡುಗರನ್ನೇ ಹೆಚ್ಚಾಗಿ ಭಯೋತ್ಪಾದನೆಗೆ ಬಳಸಿಕೊಳ್ಳುತ್ತದೆ. ಇಂತಹ ನಿಯತಕಾಲಿಕೆಗಳು ಯುವಕರನ್ನು ಆಕರ್ಷಿಸಲು ಆ ಸಂಘಟನೆಗೆ ಸಹಕಾರಿ ಎಂದು ನಿವೃತ್ತ ಐಪಿಎಸ್‌ ಅಧಿಕಾರಿ ಅರುಣ್‌ ಚೌಧರಿ ಎಂಬುವರು ಆತಂಕ ವ್ಯಕ್ತಪಡಿಸಿದ್ದಾರೆ.