ಪ್ರಕಾಶ್ ರೈ ವಿರುದ್ಧ ಹೆಚ್ಚಾದ ಆಕ್ರೋಶ; ರೈ ಪರ ಬೀದಿಗಿಳಿದ ಎಡಪಂಥೀಯರು
ನಟ ಪ್ರಕಾಶ್ ರೈ ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಚಾರವಾಗಿ ಆಡಿದ ಮಾತುಗಳು ಈಗ ವಿವಾದದ ಕಿಡಿ ಹೊತ್ತಿಸಿವೆ. ಇನ್ನೊಂದೆಡೆ ಪ್ರಕಾಶ್ ರೈ ಪರವಾಗಿ ಬೆಂಗಳೂರಿನಲ್ಲಿ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಗಳು ನಡೆದಿವೆ.
ಬೆಂಗಳೂರು (ಅ.03): ನಟ ಪ್ರಕಾಶ್ ರೈ ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಚಾರವಾಗಿ ಆಡಿದ ಮಾತುಗಳು ಈಗ ವಿವಾದದ ಕಿಡಿ ಹೊತ್ತಿಸಿವೆ. ಇನ್ನೊಂದೆಡೆ ಪ್ರಕಾಶ್ ರೈ ಪರವಾಗಿ ಬೆಂಗಳೂರಿನಲ್ಲಿ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಗಳು ನಡೆದಿವೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ವಿರುದ್ಧ ಡಿವೈಎಫ್ಐ ಕಾರ್ಯಕ್ರಮದಲ್ಲಿ ಪಾಳ್ಗೊಂಡು ನಟ ಪ್ರಕಾಶ್ ರೈ ಆಡಿದ ಮಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ವಿವಾದ ಕಿಡಿ ಭುಗಿಲೇಳುವಂತೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರೈ ವಿರುದ್ಧ ಆಕ್ರೋಶ ಮುಂದುವರಿದಿದ್ದರೆ, ರಾಜ್ಯ ಬಿಜೆಪಿ ನಾಯಕರು ಕೂಡಾ ನಟ ರೈ ವಿರುದ್ಧ ಮುಗಿಬಿದ್ದಿದ್ದಾರೆ. ನಿಜ ಜೀವನದಲ್ಲೂ ಖಳನಟರಾಗಬೇಡಿ, ಮೋದಿ ವಿರುದ್ಧ ಬೀದಿಯಲ್ಲಿ ಮಾತನಾಡಿದರೆ ಅದೇ ರೀತಿಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಬಿಜೆಪಿ ಸಂಸದ ಪ್ರತಾಪಸಿಂಹ ಎಚ್ಚರಿಸಿದ್ದಾರೆ.
ಇನ್ನು ಪ್ರಕಾಶ್ ರೈ ಅವರಿಂದ ಇಂತಹ ಮಾತು ನಿರೀಕ್ಷೆ ಮಾಡಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದರೆ, ನಟ ರೈ ಅವರ ಕ್ಷೇತ್ರವನ್ನಷ್ಟೇ ನೋಡಿಕೊಳ್ಳಲಿ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ ಪ್ರಕಾಶ್ ರೈ ಅವರಿಗೆ ಬೆಂಬಲವಾಗಿ ಎಡಪಂಥೀಯ ಸಂಘಟನೆಗಳು ಬೀದಿಗಳಿದಿವೆ. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಡಿವೈಎಫ್ಐ ಮತ್ತು ಎಸ್ಎಫ್ಐ ಪ್ರತಿಭಟನೆ ನಡೆಸಿದರೆ ಪುರಭವನದ ಎದುರು ಸಮಾನ ಮನಸ್ಕರ ವೇದಿಕೆ ಹೆಸರಿನಲ್ಲಿ ಪ್ರತಿಭಟನೆ ನಡೆದಿದೆ.
ಒಟ್ಟಾರೆ, ನಟ ಪ್ರಕಾಶ್ ರೈ ಹೇಳಿದ ಮಾತು ಈಗ ವಿವಾದದ ಕಿಡಿ ಹೊತ್ತಿಸಿರುವುದಂತೂ ನಿಜ. ಇದರ ಜೊತೆಯಲ್ಲೇ ಸಾಮಾಜಿಕ ಜಾಲತಾಣದಲ್ಲಂತೂ ಎಡಪಂಥೀಯ ಮತ್ತು ಬಲಪಂಥೀಯರ ನಡುವಿನ ವಾರ್ಗೆ ದೊಡ್ಡ ವೇದಿಕೆ ಒದಗಿಸಿದಂತಾಗಿದೆ.