ಸುಬ್ರಹ್ಮಣ್ಯದಲ್ಲಿ ಧರ್ಮ ಸಮ್ಮೇಳನ ರದ್ದು; ವಿವಾದಕ್ಕೆ ಗ್ರಾಸ
ರಾಜ್ಯದ ಶ್ರೀಮಂತ ದೇಗುಲವಾಗಿರೋ ಕುಕ್ಕೆ ಶ್ರೀಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಈ ಬಾರಿಯ ಕಿರುಷಷ್ಠಿ ಆಚರಣೆ ವೇಳೆ ನಡೆಯಬೇಕಿದ್ದ ಧರ್ಮಸಮ್ಮೇಳನವನ್ನ ಆಡಳಿತ ಮಂಡಳಿ ರದ್ದುಗೊಳಿಸಿದೆ.
ಮಂಗಳೂರು (ಡಿ.08): ರಾಜ್ಯದ ಶ್ರೀಮಂತ ದೇಗುಲವಾಗಿರೋ ಕುಕ್ಕೆ ಶ್ರೀಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಈ ಬಾರಿಯ ಕಿರುಷಷ್ಠಿ ಆಚರಣೆ ವೇಳೆ ನಡೆಯಬೇಕಿದ್ದ ಧರ್ಮಸಮ್ಮೇಳನವನ್ನ ಆಡಳಿತ ಮಂಡಳಿ ರದ್ದುಗೊಳಿಸಿದೆ.
ಆದರೆ ಅನಾದಿ ಕಾಲದಿಂದ ನಡೆದುಕೊಂಡು ಬರುತ್ತಿದ್ದ ಧರ್ಮ ಸಮ್ಮೇಳನ ರದ್ದತಿ ಇದೀಗ ಭಾರೀ ವಿವಾದ ಸೃಷ್ಟಿಸಿದ್ದು, ಅದರಲ್ಲೂ ಸ್ಥಳೀಯ ಬಿಜೆಪಿ ಶಾಸಕ ಅಂಗಾರ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕು ಅನ್ನುವ ಕಾರಣಕ್ಕೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂಬ ಆರೋಪ ವ್ಯಕ್ತವಾಗಿದೆ. ಆಡಳಿತ ಮಂಡಳಿ ನಿರ್ಧಾರದ ಬಗ್ಗೆ ಸ್ವತಃ ಸುಳ್ಯ ಶಾಸಕ ಅಂಗಾರ ಅವರ ಅಸಮಾಧಾನ ವ್ಯಕ್ತಪಡಿಸಿದ್ದು, ನಾನೊಬ್ಬ ದಲಿತ ಮತ್ತು ಬಿಜೆಪಿ ಶಾಸಕ ಅನ್ನೋ ಕಾರಣಕ್ಕೆ ರಾಜಕೀಯ ಕಾರಣದಿಂದ ನನ್ನನ್ನ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲು ಆಡಳಿತ ಮಂಡಳಿ ಸಿದ್ದವಿಲ್ಲ. ಹೀಗಾಗಿ ಧರ್ಮ ಸಮ್ಮೇಳನವನ್ನೇ ರದ್ದುಪಡಿಸಿದ್ದಾರೆ ಎಂದು ಸುವರ್ಣ ನ್ಯೂಸ್ ಗೆ ಹೇಳಿಕೆ ನೀಡಿದ್ದಾರೆ. ಅಲ್ಲದೇ ಕಳೆದ ವರ್ಷದ ಧರ್ಮ ಸಮ್ಮೇಳನದಲ್ಲಿ ಶಾಸಕರನ್ನ ಶಿಷ್ಟಾಚಾರ ಪ್ರಕಾರ ಅಧ್ಯಕ್ಷರನ್ನಾಗಿ ಮಾಡಿರಲಿಲ್ಲ. ಹೀಗಾಗಿ ಅಂಗಾರ ಅವರು ಈ ಬಗ್ಗೆ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿದ್ದರು. ಹೀಗಾಗಿ ಈ ಬಾರಿ ಅವ್ರನ್ನ ಅಧ್ಯಕ್ಷರನ್ಬಾಗಿ ಮಾಡಲು ಇಷ್ಟಪಡದ ಆಡಳಿತ ಮಂಡಳಿ ಧರ್ಮಸಮ್ಮೇಳನವನ್ನೇ ರದ್ದು ಪಡಿಸಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಈ ವಿವಾದ ಭಾರೀ ಸಂಚಲನೆ ಸೃಷ್ಟಿಸಿದ್ದು, ಡಿಸೆಂಬರ್ 19ರಿಂದ 24ರವರೆಗೆ ಕುಕ್ಕೆಯಲ್ಲಿ ಕಿರು ಷಷ್ಠಿ ನಡೆಯಲಿದೆ.