Asianet Suvarna News Asianet Suvarna News

ಗೌಡರ ಮನೆಯಲ್ಲಿ ಟೀ ಕೂಡ ಕೊಡ್ಲಿಲ್ಲ: ನಾರಾಯಣಗೌಡ

ಗೌಡರ ಮನೆಯಲ್ಲಿ ಟೀ ಕೂಡ ಕೊಡ್ಲಿಲ್ಲ: ನಾರಾಯಣಗೌಡ| ಕಿಡಿಗೇಡಿಗಳ ಮಾತು ಕೇಳಿ ನನಗೆ ನೋವು ಕೊಟ್ಟರು

KR Pete Disqualified MLA Narayana Gowda Slams HD Deve gowda Family
Author
Bangalore, First Published Aug 4, 2019, 8:16 AM IST

ಬೆಂಗಳೂರು[ಆ.04]: ಎಚ್‌.ಡಿ.ದೇವೇಗೌಡರು ಮನೆಯಲ್ಲೊಂದು ಸಿಂಡಿಕೇಟ್‌ ಬೆಳೆಸಿಕೊಂಡಿದ್ದಾರೆ. ನಾನೊಬ್ಬ ಶಾಸಕ ಮನೆಗೆ ಹೋದರೆ ಕನಿಷ್ಠ ಒಂದು ಟೀ ಕೂಡ ಕೊಡುವುದಿಲ್ಲ. ಕಿಡಿಗೇಡಿಗಳ ಮಾತು ಕೇಳಿಕೊಂಡು ನನಗೆ ನೋವು ಕೊಟ್ಟಿದ್ದಾರೆ ಎಂದು ಅನರ್ಹಗೊಂಡಿರುವ ಕೆ.ಆರ್‌. ಪೇಟೆ ಶಾಸಕ ನಾರಾಯಣಗೌಡ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ರಮೇಶ್‌ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಅನರ್ಹಗೊಂಡಿರುವ ಶಾಸಕರ ಸಭೆ ಬಳಿಕ ಮಾತನಾಡಿದ ಅವರು, ಪದವಿ ಅಥವಾ ಹಣಕ್ಕಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಕ್ಷೇತ್ರದಲ್ಲಿ ನಮಗೆ ತುಂಬಾ ನೋವಾಗಿತ್ತು. ಒಬ್ಬ ಶಾಸಕನಾಗಿ ಕೆಲಸ ಮಾಡುವುದಕ್ಕೆ ಬಿಡಲಿಲ್ಲ. ದೇವೇಗೌಡರ ಮನೆಯವರು ಕಿಡಿಗೇಡಿಗಳ ಮಾತು ಕೇಳಿಕೊಂಡು ನನಗೆ ನೋವು ಕೊಟ್ಟಿದ್ದಾರೆ. ಅವರು ದೊಡ್ಡವರು. ಕೆ.ಆರ್‌.ಪೇಟೆಯಲ್ಲಿ ಅವರು ಯಾರನ್ನು ಬೇಕಾದರೂ ನಿಲ್ಲಿಸಲಿ. ಅಭ್ಯರ್ಥಿ ಹಾಕುವ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.

ನಾನೊಬ್ಬ ಒಕ್ಕಲಿಗ, ಮಹಾರಾಷ್ಟ್ರದಲ್ಲಿ ಉದ್ಯಮ ನಡೆಸುತ್ತೇನೆ. ಒಕ್ಕಲಿಗ ಸಮುದಾಯಕ್ಕೆ ಅಲ್ಲೊಂದು ಶಕ್ತಿ ತಂದಿದ್ದೇನೆ. ಅವರು ಒಬ್ಬ ಒಕ್ಕಲಿಗನನ್ನೂ ಬೆಳೆಸಿಲ್ಲ ಎಂದು ದೂರಿದರು.

ಸುಪ್ರೀಂಕೋರ್ಟ್‌ ಮೇಲೆ ನಮಗೆ ವಿಶ್ವಾಸವಿದೆ. ಸದನ ಪ್ರಾರಂಭಕ್ಕೂ ಮುನ್ನವೇ ನಾವು ರಾಜೀನಾಮೆ ನೀಡಿದ್ದೆವು. ಆದರೆ ನಮ್ಮನ್ನು ಅನರ್ಹ ಮಾಡಿರುವ ಸ್ಪೀಕರ್‌ ತೀರ್ಮಾನ ತುಂಬಾ ನೋವು ತಂದಿದೆ. ನಾವು ಯಾವ ಪಕ್ಷಕ್ಕೆ ಹೋಗಬೇಕೆಂಬ ಬಗ್ಗೆ ತೀರ್ಮಾನ ಮಾಡಿಲ್ಲ. ನಮ್ಮ ಕಾರ್ಯಕರ್ತರನ್ನ ಮೊದಲು ಭೇಟಿ ಮಾಡಿ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ರಮೇಶ್‌ಜಾರಕಿಹೊಳಿ ಅವರ ನಿವಾಸಕ್ಕೆ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರ, ನಾನು ಹಾಗೂ ಅವರು ಸ್ನೇಹಿತರು. ಹೀಗಾಗಿ ಅವರನ್ನು ಭೇಟಿ ಮಾಡಿದ್ದೇನೆ ಅಷ್ಟೇ. ಬಿಜೆಪಿ ಸೇರುವಂತೆ ನಮಗೆ ಎಲ್ಲೂ ಆಫರ್‌ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios