ಇತ್ತ ರಾಜೀನಾಮೆ ಹೈ ಡ್ರಾಮಾ : ಅತ್ತ ಕೈ ಶಾಸಕನಿಂದ ಸ್ವ ಕ್ಷೇತ್ರದ ಅಭಿವೃದ್ಧಿ
ಇತ್ತ ರಾಜ್ಯ ರಾಜಕೀಯದಲ್ಲಿ ಹೈ ಡ್ರಾಮಾ ಮುಂದುವರಿದಿದೆ. ಆದರೆ ಅತ್ತ ಕೈ ಶಾಸಕರೋರ್ವರು ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳತ್ತ ಚಿತ್ತ ಹರಿಸಿದ್ದಾರೆ.
ಕೊಪ್ಪಳ [ಜು.11]: ಒಂದೆಡೆ ರಾಜ್ಯದಲ್ಲಿ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ. ಉಳಿಯುತ್ತೋ ಬೀಳುತ್ತೋ ಎನ್ನುವ ಗೊಂದಲ ಉಂಟಾಗಿದೆ. ಇನ್ನೊಂದೆಡೆ ಕೊಪ್ಪಳ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ತಮ್ಮ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ.
ಕೊಪ್ಪಳ ನಗರಸಭೆಯಲ್ಲಿ ಟ್ರ್ಯಾಕ್ಟರ್ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ ಅವರು ರಾಜ್ಯ ರಾಜಕೀಯ ಹೈ ಡ್ರಾಮಾ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಆಪರೇಷನ್ ಕಮಲಕ್ಕೆ ಸಿದ್ದರಾಮಯ್ಯ ಕಾರಣ ಎನ್ನುವುದು ತಪ್ಪು. ನಾನು ಮತ್ತು ಕುಷ್ಟಗಿ ಶಾಸಕ ಅಮರೇಗೌಡರು ಸಿದ್ದರಾಮಯ್ಯ ಆಪ್ತರೇ. ಆಪರೇಷನ್ ಕಮಲಕ್ಕೆ ಸಿದ್ದರಾಮಯ್ಯ ಕಾರಣವಾಗಿದ್ದರೆ ನಾವೂ ಕೂಡ ಹೋಗಬೇಕಿತ್ತು. ನಾನು ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ಕೊಡುವದಿಲ್ಲ. ಸುಖಾ ಸುಮ್ಮನೇ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿಯಿಂದ ಹಣದ ಆಮಿಷ ತೋರಿಸಿ ಸರ್ಕಾರ ಉರುಳಿಸುವ ಯತ್ನ ಮಾಡಲಾಗುತ್ತಿದೆ. ಸರ್ಕಾರ ಉಳಿಯುತ್ತೋ ಬಿಡುತ್ತೋ ಗೊತ್ತಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂದು ಹಿಟ್ನಾಳ್ ಹೇಳಿದರು.
ಇನ್ನು ಕಾರ್ಯಕರ್ತರನ್ನೂ ಕೂಡ ವಿಚಾರಿಸದೇ ಶಾಸಕರು ರಾಜೀನಾಮೆ ನೀಡಿರುವುದು ಸರಿಯಲ್ಲ ಎಂದು ಹಿಟ್ನಾಳ್ ಹೇಳಿದರು.