ಗಣಪತಿ ಪ್ರಕರಣ; ಬಿಜೆಪಿಯವರು ಟೇಪ್'ರೆಕಾರ್ಡರ್ ಇದ್ದ ಹಾಗೆ: ಕೆಜೆ ಜಾರ್ಜ್ ಟಾಂಗ್
ತಮ್ಮ ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿ ಮುಖಂಡರನ್ನು ಕೆಜೆ ಜಾರ್ಜ್ ಟೇಪ್'ರೆಕಾರ್ಡರ್'ಗೆ ಹೋಲಿಕೆ ಮಾಡಿದ್ದಾರೆ. ಡಿವೈಎಸ್'ಪಿ ಗಣಪತಿ ಪ್ರಕರಣವನ್ನು ಸಿಬಿಐಗೆ ವಹಿಸುವ ಸುಪ್ರೀಂ ಆದೇಶವನ್ನು ಸ್ವಾಗತಿಸಿರುವ ಜಾರ್ಜ್, ತಾವು ರಾಜೀನಾಮೆ ನೀಡುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. "ಬಿಜೆಪಿಯವರು ಟೇಪ್'ರೆಕಾರ್ಡರ್ ಇದ್ದ ಹಾಗೆ. ಯಾವಾಗಲೂ ರಾಜೀನಾಮೆ ಕೇಳುತ್ತಲೇ ಇರುತ್ತಾರೆ. ನಾನ್ಯಾಕೆ ರಾಜೀನಾಮೆ ನೀಡಬೇಕು? ಕೇಂದ್ರ ಸಚಿವರ ಮೇಲೂ ಎಫ್'ಐಆರ್'ಗಳು ದಾಖಲಾಗಿವೆ. ಅವರೇನಾದರೂ ರಾಜೀನಾಮೆ ಕೊಟ್ಟಿದ್ದಾರಾ?" ಎಂದು ನಗರಾಭಿವೃದ್ಧಿ ಸಚಿವರು ಪ್ರಶ್ನಿಸಿದ್ದಾರೆ.
ಬೆಂಗಳೂರು(ಸೆ. 05): ಡಿವೈಎಸ್'ಪಿ ಗಣಪತಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಬಿ ರಿಪೋರ್ಟ್ ಆಗಿ ಬಹುತೇಕ ಮುಚ್ಚಿಹೋಗಿದ್ದ ಗಣಪತಿ ಸಾವಿನ ಪ್ರಕರಣ ಮತ್ತೆ ಗರಿಗೆದರಿದೆ. ಸಾಯುವ ಮುನ್ನ ಗಣಪತಿ ಆರೋಪ ಮಾಡಿದ್ದ ಮೂವರ ವ್ಯಕ್ತಿಗಳ ಪೈಕಿ ಕೆಜೆ ಜಾರ್ಜ್ ಕೂಡ ಒಬ್ಬರಾಗಿದ್ದರಿಂದ ಅವರ ನೆತ್ತಿಯ ಮೇಲೆ ಮತ್ತೊಮ್ಮೆ ತೂಗುಗತ್ತಿ ನೇತಾಡುತ್ತಿದೆ. ಕೆಜೆ ಜಾರ್ಜ್ ತತ್'ಕ್ಷಣವೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ. ರಾಜೀನಾಮೆ ನೀಡದಿದ್ದಲ್ಲಿ ರಾಜ್ಯವ್ಯಾಪಿ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.
ಟೇಪ್ ರೆಕಾರ್ಡರ್ ಇದ್ದಂಗೆ:
ತಮ್ಮ ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿ ಮುಖಂಡರನ್ನು ಕೆಜೆ ಜಾರ್ಜ್ ಟೇಪ್'ರೆಕಾರ್ಡರ್'ಗೆ ಹೋಲಿಕೆ ಮಾಡಿದ್ದಾರೆ. ಡಿವೈಎಸ್'ಪಿ ಗಣಪತಿ ಪ್ರಕರಣವನ್ನು ಸಿಬಿಐಗೆ ವಹಿಸುವ ಸುಪ್ರೀಂ ಆದೇಶವನ್ನು ಸ್ವಾಗತಿಸಿರುವ ಜಾರ್ಜ್, ತಾವು ರಾಜೀನಾಮೆ ನೀಡುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. "ಬಿಜೆಪಿಯವರು ಟೇಪ್'ರೆಕಾರ್ಡರ್ ಇದ್ದ ಹಾಗೆ. ಯಾವಾಗಲೂ ರಾಜೀನಾಮೆ ಕೇಳುತ್ತಲೇ ಇರುತ್ತಾರೆ. ನಾನ್ಯಾಕೆ ರಾಜೀನಾಮೆ ನೀಡಬೇಕು? ಕೇಂದ್ರ ಸಚಿವರ ಮೇಲೂ ಎಫ್'ಐಆರ್'ಗಳು ದಾಖಲಾಗಿವೆ. ಅವರೇನಾದರೂ ರಾಜೀನಾಮೆ ಕೊಟ್ಟಿದ್ದಾರಾ?" ಎಂದು ನಗರಾಭಿವೃದ್ಧಿ ಸಚಿವರು ಪ್ರಶ್ನಿಸಿದ್ದಾರೆ.
ಸಿಎಂ ರಿಯಾಕ್ಷನ್:
ಡಿವೈಎಸ್'ಪಿ ಸಾವು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದ ಬೆಳವಣಿಗೆ ಕುರಿತು ಹೆಚ್ಚು ಪ್ರತಿಕ್ರಿಯಿಸಲು ಸಿಎಂ ಸಿದ್ದರಾಮಯ್ಯ ನಕಾರ ತೋರಿದ್ದಾರೆ. "ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರತಿ ಇನ್ನೂ ನಮ್ಮ ಕೈ ತಲುಪಿಲ್ಲ. ಅದು ಸಿಕ್ಕ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ಈ ಸಂಬಂಧ ಬಿ ರಿಪೋರ್ಟ್ ರದ್ದು ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಮರುತನಿಖೆಗೆ ಆದೇಶ ಆಗಿದೆಯೋ ಇಲ್ಲವೋ ಅದೂ ಗೊತ್ತಿಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರತಿ ಬಂದ ಬಳಿಕವಷ್ಟೇ ಗೊತ್ತಾಗುತ್ತದೆ," ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಏನಿದು ಪ್ರಕರಣ?
ಕಳೆದ ವರ್ಷ, 2016ರ ಜುಲೈ 7ರಂದು ಡಿವೈಎಸ್'ಪಿ ಗಣಪತಿಯವರು ಮಡಿಕೇರಿಯ ಲಾಡ್ಜ್'ವೊಂದರಲ್ಲಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆ ಸಾವಿಗೂ ಕೆಲ ಗಂಟೆಗಳ ಮೊದಲಷ್ಟೇ ಅವರು ಸ್ಥಳೀಯ ಟಿವಿ ಚಾನೆಲ್'ವೊಂದರಲ್ಲಿ ಅನೇಕ ಸ್ಫೋಟಕ ವಿಚಾರಗಳ ಕುರಿತು ಮಾತನಾಡಿದ್ದರು. ಆಗಿನ ಗೃಹ ಸಚಿವರಾದ ಕೆ.ಜೆ.ಜಾರ್ಜ್, ಆಗಿನ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಾಂತಿ ಮತ್ತು ಆಗಿನ ಗುಪ್ತಚರ ಎಡಿಜಿಪಿ ಎಎಂ ಪ್ರಸಾದ್ ಅವರ ಮೇಲೆ ನೇರವಾಗಿ ಆರೋಪ ಮಾಡಿದ್ದರು. ತಮ್ಮ ಮೇಲೆ ಸಾಕಷ್ಟು ಕಿರುಕುಳವಾಗುತ್ತಿದ್ದು, ತಾನು ಬೇಸತ್ತುಹೋಗಿದ್ದೇನೆ ಎಂದು ಅಳಲು ತೋಡಿಕೊಂಡಿದ್ದರು. ಅಲ್ಲದೇ ಬಹಳ ಮುಖ್ಯವಾಗಿ, ತನಗೆ ಸಾವೇನಾದರೂ ಆದರೆ ಅದಕ್ಕೆ ಈ ಮೂವರೇ ಕಾರಣ ಎಂದು ಜಾರ್ಜ್, ಮೊಹಂತಿ ಮತ್ತು ಪ್ರಸಾದ್ ಅವರತ್ತ ಗಣಪತಿ ನೇರವಾಗಿ ಬೊಟ್ಟುಮಾಡಿ ಹೇಳಿದ್ದರು.
ಆ ಸಂದರ್ಶನ ಮುಗಿಸಿ ತಮ್ಮ ಲಾಡ್ಜ್'ನ ರೂಮಿನೊಳಗೆ ಹೋದ ಗಣಪತಿ ಮರುದಿನ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದರು. ರಾಜ್ಯ ಸರಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತು. ಕೆ.ಜೆ.ಜಾರ್ಜ್ ತಮ್ಮ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತನಿಖೆ ನಡೆಸಿದ ಸಿಐಡಿ, ಗಣಪತಿ ಮಾಡಿರುವ ಆರೋಪಗಳನ್ನು ಸಮರ್ಥಿಸುವ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಹೇಳಿ ಬಿ ರಿಪೋರ್ಟ್ ಕಳುಹಿಸಿತು. ಇದರೊಂದಿಗೆ ಕೆ.ಜೆ. ಜಾರ್ಜ್ ಮತ್ತೊಮ್ಮೆ ಸಿದ್ದರಾಮಯ್ಯ ಸಂಪುಟಕ್ಕೆ ನಗರಾಭಿವೃದ್ಧಿ ಸಚಿವರಾಗಿ ಕಂಬ್ಯಾಕ್ ಮಾಡಿದರು.