ಹಜ್ ಯಾತ್ರೆ ಸಬ್ಸಿಡಿ ಸ್ಥಗಿತ : ಖಾದರ್ ಸ್ವಾಗತ
ಹಜ್ ಯಾತ್ರೆಗೆ ಸಬ್ಸಿಡಿ ಇದ್ದಾಗ ಪೂರ್ವ ನಿಗದಿಯಂತೆ ಯಾತ್ರಿಕರು ಏರ್ ಇಂಡಿಯಾ ವಿಮಾನದಲ್ಲೇ ತೆರಳುತ್ತಿದ್ದರು. ಇದರಿಂದ ಏರ್ ಇಂಡಿಯಾಕ್ಕೆ ಲಾಭವಾಗುತ್ತಿತ್ತು. ಈಗ ಸಬ್ಸಿಡಿ ನಿಲ್ಲಿಸಿದ್ದರಿಂದ ಅದಕ್ಕಿಂತಲೂ ಕಡಿಮೆ ದರದ ವಿಮಾನಗಳಲ್ಲಿ ಹೋಗಲು ಅವಕಾಶ ದೊರೆತಂತಾಗಿದೆ.
ಮಂಗಳೂರು(ಜ.18): ಹಜ್ ಯಾತ್ರಿಗಳಿಗೆ ನೀಡುವ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿರುವುದನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಆದರೆ, ಯಾರನ್ನೋ ಸಂತೋಷಪಡಿಸಲು ಇಂತಹ ನಿರ್ಧಾರ ಸರಿಯಲ್ಲ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಸ್ಲಿಮರು ಹಜ್ ಯಾತ್ರೆಗೆ ಹೋಗುವುದು ಕಡ್ಡಾಯ. ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತದೆ ಎಂಬ ಕಾರಣಕ್ಕೆ ಅವರೇನೂ ಯಾತ್ರೆಗೆ ಹೋಗುವುದಿಲ್ಲ. ಹಜ್ ಯಾತ್ರೆಗೆ ಸಬ್ಸಿಡಿ ಇದ್ದಾಗ ಪೂರ್ವ ನಿಗದಿಯಂತೆ ಯಾತ್ರಿಕರು ಏರ್ ಇಂಡಿಯಾ ವಿಮಾನದಲ್ಲೇ ತೆರಳುತ್ತಿದ್ದರು. ಇದರಿಂದ ಏರ್ ಇಂಡಿಯಾಕ್ಕೆ ಲಾಭವಾಗುತ್ತಿತ್ತು. ಈಗ ಸಬ್ಸಿಡಿ ನಿಲ್ಲಿಸಿದ್ದರಿಂದ ಅದಕ್ಕಿಂತಲೂ ಕಡಿಮೆ ದರದ ವಿಮಾನಗಳಲ್ಲಿ ಹೋಗಲು ಅವಕಾಶ ದೊರೆತಂತಾಗಿದೆ. ಯಾತ್ರಿಗಳಿಗೆ ವೈಯಕ್ತಿಕವಾಗಿ ಇದರಿಂದ ದೊಡ್ಡ ಹೊರೆಯಾಗದು ಎಂದರು.
ಹಜ್ ಸಬ್ಸಿಡಿ ಪ್ರಶ್ನಿಸಿ ವ್ಯಕ್ತಿಯೊಬ್ಬರು ಕೋಟ್'ಗೆರ್ ಹೋದಾಗ, ಪ್ರತಿವರ್ಷ ಶೇ.10ರಷ್ಟು ಕಡಿತ ಮಾಡಿ, 10 ವರ್ಷಗಳಲ್ಲಿ ಸಂಪೂರ್ಣ ಸಬ್ಸಿಡಿ ನಿಲ್ಲಿಸುವಂತೆ ನ್ಯಾಯಾಲಯ 2012ರಲ್ಲೇ ಆದೇಶಿಸಿತ್ತು. ಈ ಆದೇಶದಂತೆ 2022ರಲ್ಲಿ ಸಬ್ಸಿಡಿ ಸಂಪೂರ್ಣ ಕಡಿತ ಆಗಬೇಕಿತ್ತು. ಆದರೆ, ಐದೇ ವರ್ಷಗಳಲ್ಲಿ ಸಂಪೂರ್ಣ ಸಬ್ಸಿಡಿ ನಿಲ್ಲಿಸಲಾಗಿದೆ ಎಂದರು.