ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ಮತ್ತೋರ್ವ ಮುಖಂಡ
ಒಂದು ವೇಳೆ ತಮ್ಮನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದರೆ ಸಮರ್ಥವಾಗಿ ಕೆಲಸ ಮಾಡಲು ತಾನು ಸಿದ್ಧನಿದ್ದು ಪಕ್ಷ ಸಂಘಟನೆ ಸಲುವಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ನವದೆಹಲಿ : ಒಂದು ವೇಳೆ ತಮ್ಮನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದರೆ ಸಮರ್ಥವಾಗಿ ಕೆಲಸ ಮಾಡಲು ತಾನು ಸಿದ್ಧನಿದ್ದು ಪಕ್ಷ ಸಂಘಟನೆ ಸಲುವಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ನವದೆಹಲಿಯ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು. ಇತ್ತೀಚೆಗೆ ನಡೆದ ಸಂಸದರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೆಲವರು ನನ್ನ ಹೆಸರು ಸೂಚಿಸಿದ್ದಾರೆ. ನನಗೆ ಅವಕಾಶ ನೀಡಿದರೆ ಸಮರ್ಥವಾಗಿ ಕೆಲಸ ಮಾಡುತ್ತೇನೆ.
ಲೋಕಸಭೆ ಚುನಾವಣೆಗೆ ಸ್ಪರ್ಧಿಸದೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವೆ. ಅಧ್ಯಕ್ಷ ಸ್ಥಾನ ಕೊಡದಿದ್ದರೆ ಸಂಸತ್ತಿಗೆ ಸ್ವರ್ಧೆ ಮಾಡುತ್ತೇನೆ ಎಂದರು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ಈ ಹಿಂದೆ ಎರಡು ಬಾರಿ ನನ್ನನ್ನು ಸೂಚಿಸಿದ್ದರು. ಆದರೆ ಕಾರಣಾಂತರದಿಂದ ಅದು ಸಾಧ್ಯವಾಗಿಲ್ಲ. ಈಗ ಅವಕಾಶ ಕೊಟ್ಟರೆ ಸಮರ್ಥ ವಾಗಿ ಕೆಲಸ ಮಾಡುತ್ತೇನೆ. ಒಂದು ವೇಳೆ ಬೇರೆಯವರಿಗೆ ಅವಕಾಶ ಕೊಟ್ಟರೂ ನಾನು ವಿರೋಧಿಸುವುದಿಲ್ಲ ಎಂದು ಮುನಿಯಪ್ಪ ಸ್ಪಷ್ಟಪಡಿಸಿದರು.