[ವೈರಲ್ ಚೆಕ್] ಅಕ್ಕಿ ಕದ್ದ ಎಂದು ಆದಿವಾಸಿಯನ್ನು ಹತ್ಯೆ ಮಾಡಿದ್ದು ಮುಸ್ಲಿಮರೇ..?
ಅಕ್ಕಿ ಕದ್ದ ಎಂದು ಆರೋಪಿಸಿ ಕೇರಳದ ಆದಿವಾಸಿ ಯುವಕ ಮಧು ಎಂಬಾತನನ್ನು ಅಮಾನವೀಯವಾಗಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಕೋಮು ಬಣ್ಣ ಮೆತ್ತುವ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ತಿರುವನಂತಪುರಂ: ಅಕ್ಕಿ ಕದ್ದ ಎಂದು ಆರೋಪಿಸಿ ಕೇರಳದ ಆದಿವಾಸಿ ಯುವಕ ಮಧು ಎಂಬಾತನನ್ನು ಅಮಾನವೀಯವಾಗಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಕೋಮು ಬಣ್ಣ ಮೆತ್ತುವ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
‘ಬಡ ಆದಿವಾಸಿಯನ್ನು ಹತ್ಯೆಗೈಯಲಾಗಿದೆ. ಆದರೆ ಯಾರೂ ಆ ಬಗ್ಗೆ ಮಾತನಾಡುತ್ತಿಲ್ಲ. ಏಕೆಂದರೆ ಆರೋಪಿಗಳು ಮುಸ್ಲಿಮರು, ಅಲ್ಲಿನ ರಾಜ್ಯ ಸರ್ಕಾರ ಕಮ್ಯುನಿಸ್ಟರದ್ದು’ ಎಂದು ಸಂದೇಶದಲ್ಲಿ ಸಾರಲಾಗುತ್ತಿದೆ.
ಈ ಕುರಿತ ಪೋಸ್ಟರ್ ಕೆಳಗೆ ‘ಹುಸ್ಸೇನ್ ಎಂಬುವರ ಅಂಗಡಿಯಿಂದ ಮಧು ಅಕ್ಕಿ ಕದ್ದಿದ್ದ. ಅದೇ ಕಾರಣಕ್ಕೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಉಬೈದ್, ನಜೀಬ್, ಅಬ್ದುಲ್ ಕರೀಮ್ ಎಂಬುವವರ ಗುಂಪು ಹತ್ಯೆ ಮಾಡಿದೆ’ ಎಂದು ಒಕ್ಕಣೆಯನ್ನೂ ಬರೆಯಲಾಗಿದೆ.
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಈ ರೀತಿಯ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. ಆದರೆ ನಿಜಕ್ಕೂ ಮಧುವನ್ನು ಹತ್ಯೆ ಮಾಡಿದ್ದು ಕೇವಲ ಮುಸ್ಲಿಮರೇ ಎಂದರೆ, ಅಲ್ಲ. ಇದುವರೆಗೆ ಪೊಲೀಸರು ಆರೋಪಿಗಳೆಂದು ಬಂಧಿಸಿರುವವರ ಪಟ್ಟಿಯಲ್ಲಿ ಹಿಂದು, ಮುಸ್ಲಿಂ ಎರಡೂ ಸಮುದಾಯಕ್ಕೆ ಸೇರಿದ ಜನರ ಹೆಸರುಗಳಿವೆ.
ಆ ಹೆಸರುಗಳು ಇಂತಿವೆ: ಅನೀಶ್, ಹುಸ್ಸೇನ್, ಶಂಶುದ್ದೀನ್, ರಾಧಾಕೃಷ್ಣ, ಅಬೂಬಕ್ಕರ್, ಜೈಜಿಮೋನ್, ಉಬೈದ್, ನಜೀಬ್, ಹರೀಶ್, ಬಿಜು, ಅಬ್ದುಲ್ ಕರೀಮ್, ಮುನೀರ್ ಮತ್ತು ಸತೀಶ್. ಆದರೆ ಕೆಲ ಕಿಡಿಗೇಡಿಗಳು ಈ ಪ್ರಕರಣಕ್ಕೆ ಕೋಮ ಬಣ್ಣ ನೀಡಲು ಕೇವಲ ಮುಸ್ಲಿಂ ಆರೋಪಿಗಳ ಹೆಸರನ್ನು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ಸತ್ಯ ತಿಳಿದ ನಂತರ ಸೆಹ್ವಾಗ್ ಕ್ಷಮೆ ಕೇಳಿ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.