ಕೇರಳಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ನೆರವು ನೀಡಲಿದೆ. ನೆರೆ ಹಾವಳಿಯಲ್ಲಿ ಸಿಲುಕಿರುವವರಿಗೆ ನೆರವಾಗಲು ರಾಷ್ಟ್ರೀಯ ವಿಪತ್ತು ಸಮಿತಿಯೊಂದನ್ನು ರಚಿಸುವಂತೆ ಯುಎಇ ಅಧ್ಯಕ್ಷ ಶೇಖ್ ಖಲೀಫಾ ಸೂಚಿಸಿದ್ದಾರೆ. ಈ ವೇಳೆ ಕೇರಳದ ಕೊಡುಗೆಯನ್ನು ಕೊಂಡಾಡಿದ್ದಾರೆ.
ಕೊಚ್ಚಿ, ಆಗಸ್ಟ್ 18: ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ನೆರವಾಗಲು ಯುನೈಟೆಡ್ ಅರಬ್ ಎಮಿರೇಟ್ಸ್ ಮುಂದಾಗಿದೆ. ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುವ ಸಲುವಾಗಿಯೇ ಯುಎಇ ಸಮಿತಿಯೊಂದನ್ನು ರಚಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶೇಖ್ ಖಲೀಫಾ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವುದು ದೇಶದ ವಿಶೇಷ ಜವಾಬ್ದಾರಿಯಾಗಿದೆ. ಕೇರಳದಿಂದ ಬಂದ ಅನೇಕ ಜನರು ಯುಎಇಯಲ್ಲಿ ನೆಲೆಸಿದ್ದಾರೆ ಎಂದಿದ್ದಾರೆ. ಕೇರಳದ ಜನರು ಯಾವಾಗಲೂ ಮತ್ತು ಇಂದಿಗೂ ಯುಎಇಯ ಯಶಸ್ಸಿನ ಕಥೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ ಎಂದಿದ್ದಾರೆ.
ಕೇರಳದಲ್ಲಿ 400 ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದು ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ದೇಶದ ಹಲವು ಭಾಗಗಳಿಂದ ಪರಿಹಾರ ಹರಿದು ಬರುತ್ತಿದ್ದು ಸೇನಾ ಪಡೆಗಳು ಪರಿಹಾರ ಕಾರ್ಯದಲ್ಲಿ ನಿರತವಾಗಿವೆ.
