ಕೇರಳದ ವಯನಾಡು ಅಭಯಾರಣ್ಯಗಳ ನಡುವಿನ ಮೇಲುಸೇತುವೆ ಯೋಜನೆಗೆ ಕೇರಳ ಸರ್ಕಾರ 500 ಕೋಟಿ ರು. ಹಣ ತೆಗೆದಿರಿಸಿದೆ.

ತಿರುವನಂತಪುರ[ಫೆ.01]: ಇನ್ನೂ ಅನುಮೋದನೆಯೇ ಸಿಗದ, ಕರ್ನಾಟಕದ ಬಂಡೀಪುರ ಮತ್ತು ಕೇರಳದ ವಯನಾಡು ಅಭಯಾರಣ್ಯಗಳ ನಡುವಿನ ಮೇಲುಸೇತುವೆ ಯೋಜನೆಗೆ ಕೇರಳ ಸರ್ಕಾರ 500 ಕೋಟಿ ರು. ಹಣ ತೆಗೆದಿರಿಸಿದೆ. ಗುರುವಾರ ಇಲ್ಲಿ ಮಂಡಿಸಲಾದ ರಾಜ್ಯ ಬಜೆಟ್‌ನಲ್ಲಿ ಹಣಕಾಸು ಸಚಿವ ಥಾಮಸ್‌ ಐಸಾಕ್‌ ಈ ಘೋಷಣೆ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕ ಮತ್ತು ಕೇರಳವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಅಭಯಾರಣ್ಯದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರದಿಂದ ಪ್ರಾಣಿಗಳ ಓಡಾಟಕ್ಕೆ ಅಡ್ಡಿಯಾಗುತ್ತದೆ ಮತ್ತು ಅವುಗಳು ಸಾವನ್ನಪ್ಪುವ ಸಾಧ್ಯತೆ ಹೆಚ್ಚು ಎನ್ನುವ ಕಾರಣಕ್ಕೆ, ಇಲ್ಲಿ ಅನುಮತಿ ನಿರಾಕರಿಸಲಾಗಿದೆ.

ಆದರೆ ಅಭಯಾರಣ್ಯದ ಸೂಕ್ಷ್ಮ ಪ್ರದೇಶದಲ್ಲಿ ಮೇಲುಸೇತುವೆ ನಿರ್ಮಿಸುವ ಮೂಲಕ ರಾತ್ರಿ ವೇಳೆಯೂ ವಾಹನ ಸಂಚಾರ ನಡೆಸುವ ಉದ್ದೇಶ ಕೇರಳದ್ದು. ಆದರೆ ಇದಕ್ಕೆ ಕರ್ನಾಟಕ ಸರ್ಕಾರ ಪೂರ್ಣ ವಿರೋಧ ಹೊಂದಿದೆ. ಆದರೆ ಕೇಂದ್ರ ಸರ್ಕಾರ ಮೇಲುಸೇತುವೆ ಬಗ್ಗೆ ಒಲವು ವ್ಯಕ್ತಪಡಿಸಿದೆ. ಹೀಗಾಗಿ ಗುರುವಾರ ಮಂಡಿಸಲಾದ ಬಜೆಟ್‌ನಲ್ಲಿ ಯೋಜನೆಗೆಂದು 500 ಕೋಟಿ ರು. ತೆಗೆದಿರಿಸಲಾಗಿದೆ. ಒಂದು ವೇಳೆ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದೇ ಆದಲ್ಲಿ, ತಕ್ಷಣವೇ ಕಾಮಗಾರಿ ಆರಂಭಿಸುವ ಉದ್ದೇಶದಿಂದ ಕೇರಳ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಸದ್ಯ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.