ಮಧುಮೇಹ ತೀವ್ರ: ಕೇಜ್ರಿವಾಲ್'ಗೆ ಮತ್ತೆ ಬೆಂಗಳೂರಲ್ಲಿ ಚಿಕಿತ್ಸೆ
ನಾಳೆ ಆಗಮನ | 10-12 ದಿನ ಶುಶ್ರೂಷೆ ಸಾಧ್ಯತೆ
ನವದೆಹಲಿ: ಕಳೆದ 2 ತಿಂಗಳಿಂದ ಪಂಜಾಬ್ ಹಾಗೂ ಗೋವಾ ವಿಧಾನಸಭೆ ಚುನಾವಣೆಗಾಗಿ ವಿಶ್ರಮಿಸದೇ ಪ್ರಚಾರದಲ್ಲಿ ನಿರತರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇದೀಗ ಅನಾರೋಗ್ಯಕ್ಕೀಡಾಗಿದ್ದಾರೆ.
ದಿಲ್ಲಿಯಿಂದ ವಿವಿಧ ರಾಜ್ಯಗಳಿಗೆ ಚುನಾವಣೆ ಪ್ರಚಾರಕ್ಕೆ ತೆರಳಿದ ಪರಿಣಾಮ ಅವರ ಆಹಾರದಲ್ಲಿ ವ್ಯತ್ಯಯವಾಗಿದ್ದು, ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏಕಾಏಕಿ ಏರಿಕೆಯಾಗಿದೆ. ಹೀಗಾಗಿ ಅವರೀಗ ದಿನಕ್ಕೆ ಮೂರು ಬಾರಿ ಇನ್ಸುಲಿನ್ ತೆಗೆದುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಆಮ್ಆದ್ಮಿ ಪಕ್ಷ ಬಹುವಾಗಿ ನಂಬಿರುವ ಪಂಜಾಬ್ ಮತ್ತು ಗೋವಾದಲ್ಲಿ ಮತದಾನ ಮುಗಿದಿರುವ ಹಿನ್ನೆಲೆಯಲ್ಲಿ ಅವರು ತುರ್ತು ಚಿಕಿತ್ಸೆಗೆ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆಗಾಗಿ ಮಂಗಳವಾರವೇ ಬೆಂಗಳೂರಿಗೆ ತೆರಳಲಿದ್ದಾರೆ. ಫೆ.7ರಿಂದ ಸುಮಾರು 10-12 ದಿನಗಳ ಕಾಲ ಬೆಂಗಳೂರಿನಲ್ಲಿ ಪ್ರಕೃತಿ ಚಿಕಿತ್ಸೆಗೆ (ನ್ಯಾಚುರೋಪತಿ) ಅವರು ಒಳಗಾಗಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮೂಲಗಳು ತಿಳಿಸಿವೆ.
ಕೇಜ್ರಿವಾಲ್ ಚಿಕಿತ್ಸೆಗಾಗಿ ಬೆಂಗಳೂರಿಗೆ ಭೇಟಿ ನೀಡುತ್ತಿರುವುದು ಇದು 4ನೇ ಬಾರಿ. ಈ ಹಿಂದೆ 2015ರ ಮಾ.5ರಂದು ಜಿಂದಾಲ್ ನ್ಯಾಚುರೋಪತಿ ಇನ್ಸಿ$್ಟಟ್ಯೂಟ್ಗೆ ದಾಖಲಾಗಿ ಕೆಮ್ಮಿಗೆ ಚಿಕಿತ್ಸೆ ಪಡೆದಿದ್ದರು. ಬಳಿಕ 2016ರ ಜ.30ರಂದು ಕೆಮ್ಮು ಮತ್ತು ಸಕ್ಕರೆ ಕಾಯಿಲೆಯ ಚಿಕಿತ್ಸೆಗಾಗಿ ಜಿಂದಾಲ್ ನ್ಯಾಚುರೋಪತಿ ಇನ್ಸ್ಟಿಟ್ಯೂಟ್ಗೆ ಮತ್ತೊಮ್ಮೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. 2016ರ ಸೆ.15ರಂದು ಬೆಂಗಳೂರಿನ ಮಜುಂದಾರ್ ಶಾ ಕ್ಯಾನ್ಸರ್ ಸೆಂಟರ್ನಲ್ಲಿ ಕೆಮ್ಮಿಗೆ ಚಿಕಿತ್ಸೆ ಪಡೆದುಕೊಂಡಿದ್ದರು. ಈ ವೇಳೆ ಕಿರುನಾಲಿಗೆ ಚಿಕಿತ್ಸೆ ನೆರವೇರಿಸಲಾಗಿತ್ತು.