ಗೌರಿ ಲಂಕೇಶ್ ಹತ್ಯೆ ತನಿಖೆ ಚುರುಕುಗೊಳಿಸುವ ಕುರಿತಂತೆ ಗೌರಿ ಲಂಕೇಶ್ ಬಳಗ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲು ತೆರಳುತ್ತಿದ್ದಾಗ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.

ಬೆಂಗಳೂರು(ಡಿ.05): ಗೌರಿ ಲಂಕೇಶ್ ಹತ್ಯೆ ನಡೆದು ಇಂದಿಗೆ 3 ತಿಂಗಳಾಗಿದ್ದು ಇದುವರೆಗೂ ಹಂತಕರು ಪತ್ತೆಯಾಗಿಲ್ಲ. ಇದರ ಬೆನ್ನಲ್ಲೇ ಗೌರಿ ಲಂಕೇಶ್ ಬಳಗ ಇಂದು ಪ್ರತಿಭಟನೆ ನಡೆಸುವಾಗ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್, ಸಾಹಿತಿ ಚಂದ್ರಶೇಖರ್ ಪಾಟೀಲ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆ ತನಿಖೆ ಚುರುಕುಗೊಳಿಸುವ ಕುರಿತಂತೆ ಗೌರಿ ಲಂಕೇಶ್ ಬಳಗ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲು ತೆರಳುತ್ತಿದ್ದಾಗ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ತಳ್ಳಿಹಾಕಿ ಸಿಎಂ ಮನೆಯತ್ತ ಮುನ್ನುಗ್ಗುತ್ತಿದ್ದಾಗ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಯಿತು. ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿಭಟನಾಕಾರರು ಪ್ರಧಾನಿ ಮೋದಿ ವಿರುದ್ಧ ಕೂಡಾ ಘೋಷಣೆಗಳನ್ನು ಕೂಗಿದರು.

ಗೌರಿ ಹತ್ಯೆ ತನಿಖೆ ಎಲ್ಲೋ ಒಂದು ಕಡೆ ತುಂಬಾ ವಿಳಂಬವಾಗುತ್ತಿದೆ ಎಂದು ಅನಿಸುತ್ತಿದೆ. ಈ ಘಟನೆಯಿಂದ ಮಾಧ್ಯಮದ ಜನ ಯಾವ ಧೈರ್ಯದಲ್ಲಿ ಬದುಕಬೇಕು. ಸಮಯ ಜಾರುತ್ತಾ ಹೋದ ಹಾಗೆ ಭಯ ಹೆಚ್ಚಾಗುತ್ತಿದೆ. ಆದರೆ ಹಂತಕರನ್ನು ಹಿಡಿಯುವ ವಿಶ್ವಾಸವಿದೆ ಎಂದು ಕವಿತಾ ಲಂಕೇಶ್ ಹೇಳಿದ್ದಾರೆ.