ಕಾಶ್ಮೀರದಲ್ಲಿ ಮಸೀದಿ ಬಳಿಯೇ ಪೊಲೀಸ್ ಅಧಿಕಾರಿಯ ಬಲಿತೆಗೆದ ಜನರ ಗುಂಪು
ಘಟನೆ ವೇಳೆ ಡಿಎಸ್'ಪಿ ಮೊಹಮ್ಮದ್ ಆಯುಬ್ ಪಂಡಿತ್ ತೋರಿದ ಉದಾತ್ತತೆ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ. ತನ್ನ ಮೇಲೆ ನೂರಕ್ಕೂ ಹೆಚ್ಚು ಜನರು ಮುತ್ತಿಕೊಂಡು ಹಲ್ಲೆ ಮಾಡುವಾಗ ಯಾರೇ ಆದರೂ ಆತ್ಮರಕ್ಷಣೆಗೆ ಗುಂಡು ಹಾರಿಸಿ ಎದುರಾಳಿಗಳನ್ನು ಕೊಲ್ಲುತ್ತಾರೆ.
ಶ್ರೀನಗರ(ಜೂನ್ 23): ಜಮ್ಮು-ಕಾಶ್ಮೀರದಲ್ಲಿ ಜನರ ಹಿಂಸಾಚಾರ ತಾರಕಕ್ಕೇರಿದೆ. ಇಲ್ಲಿಯ ಜಾಮಿಯಾ ಮಸೀದಿಯ ಹೊರಗೆ ನಿನ್ನೆ ತಡರಾತ್ರಿ 200-300 ಜನರ ಗುಂಪೊಂದು ಪೊಲೀಸ್ ಅಧಿಕಾರಿಯನ್ನು ಥಳಿಸಿ ಕೊಂದುಹಾಕಿದೆ. ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿರುವ ವೇಳೆಯಲ್ಲೇ ಈ ದುರ್ಘಟನೆ ಸಂಭವಿಸಿದೆ. ಡಿಎಸ್'ಪಿ ಮೊಹಮ್ಮದ್ ಆಯುಬ್ ಪಂಡಿತ್ ಅವರು ಜನರ ಹಿಂಸಾಚಾರಕ್ಕೆ ಬಲಿಯಾದ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಅಷ್ಟು ಜನರ ಪೈಕಿ ಮೂವರು ದುಷ್ಕರ್ಮಿಗಳನ್ನು ಗುರುತಿಸಲಾಗಿದ್ದು, ಇಬ್ಬರನ್ನು ಇಂದು ಬೆಳಗ್ಗೆ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದುಷ್ಕರ್ಮಿಗಳ ಪ್ರಾಣಕ್ಕೆ ಬೆಲೆ ಕೊಟ್ಟ ಅಪ್ರತಿಮ ಪೊಲೀಸ್:
ಘಟನೆ ವೇಳೆ ಡಿಎಸ್'ಪಿ ಮೊಹಮ್ಮದ್ ಆಯುಬ್ ಪಂಡಿತ್ ತೋರಿದ ಉದಾತ್ತತೆ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ. ತನ್ನ ಮೇಲೆ ನೂರಕ್ಕೂ ಹೆಚ್ಚು ಜನರು ಮುತ್ತಿಕೊಂಡು ಹಲ್ಲೆ ಮಾಡುವಾಗ ಯಾರೇ ಆದರೂ ಆತ್ಮರಕ್ಷಣೆಗೆ ಗುಂಡು ಹಾರಿಸಿ ಎದುರಾಳಿಗಳನ್ನು ಕೊಲ್ಲುತ್ತಾರೆ. ಅದರೆ, ಡಿಎಸ್'ಪಿ ಪಂಡಿತ್ ಮೂರು ಸುತ್ತು ಗುಂಡು ಹಾರಿಸಿ ಹಲ್ಲೆಕೋರರ ಕಾಲಿಗೆ ಗಾಯ ಮಾಡಿದ್ದಾರೆ. ತನ್ನ ಪ್ರಾಣ ತೆಗೆಯುತ್ತಿದ್ದ ದುಷ್ಕರ್ಮಿಗಳ ಪ್ರಾಣಕ್ಕೆ ಬೆಲೆ ಕೊಟ್ಟ ಡಿಎಸ್'ಪಿಯ ಮನಸಿಗೆ ಏನನ್ನಬೇಕು?
ಇಂಥ ಅಪ್ರತಿಮ ಪೊಲೀಸ್ ಅಧಿಕಾರಿಯ ಘೋರ ಸಾವು ಕಾಶ್ಮೀರ ಕಣಿವೆಯಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡುತ್ತದಾ? ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಈ ಘಟನೆಗೆ ಶಾಕ್ ವ್ಯಕ್ತಪಡಿಸಿದ್ದು, ಕರ್ತವ್ಯ ನಿಭಾಯಿಸುತ್ತಿದ್ದ ಪೊಲೀಸನ ಹತ್ಯೆಗಿಂತ ನಾಚಿಕೆಗೇಡಿನದ ಕೃತ್ಯ ಮತ್ತೊಂದಿಲ್ಲ ಎಂದು ಖಂಡಿಸಿದ್ದಾರೆ.