ಕಾಶ್ಮೀರದಾದ್ಯಂತ ನಿಷೇಧಾಜ್ಞೆಯಿಂದ 1000 ಕೋಟಿ ನಷ್ಟ!
ಕಾಶ್ಮೀರದಾದ್ಯಂತ ನಿಷೇಧಾಜ್ಞೆಯಿಂದ 1000 ಕೋಟಿ ನಷ್ಟ| ದಿನನಿತ್ಯ ಕನಿಷ್ಠ 175 ಕೋಟಿ ರು. ನಷ್ಟಉಂಟಾಗಿದೆ| ನಿಷೇಧಾಜ್ಞೆಯಿಂದಾಗಿ ಬೇಕರಿ ಹಾಗೂ ಜಾನುವಾರು ಉದ್ಯಮಿಗಳು ಹೆಚ್ಚಿನ ತೊಂದರೆ
ಶ್ರೀನಗರ[ಆ.12]: ಸಂವಿಧಾನದ 370 ನೇ ವಿಧಿ ರದ್ದಿನಿಂದ ಉಂಟಾಗಬಹುದಾದ ಸಂಭಾವ್ಯ ಹಿಂಸಾಚಾರ ತಪ್ಪಿಸಲು, ಮುನ್ನೆಚ್ಚರಿಕಾ ಕ್ರಮವಾಗಿ ಜಮ್ಮು ಕಾಶ್ಮೀರದಾದ್ಯಂತ ವಿಧಿಸಲಾಗಿದ್ದ ನಿಷೇಧಾಜ್ಞೆಯಿಂದಾಗಿ ಕಳೆದ ಒಂದು ವಾರದಲ್ಲಿ ಸುಮಾರು 1000 ಕೋಟಿಯಷ್ಟು ವ್ಯಾಪಾರವನ್ನು ಉದ್ಯಮಿಗಳು ಕಳೆದುಕೊಂಡಿದ್ದಾರೆ.
ನಿಷೇಧಾಜ್ಞೆ ವಿಧಿಸಿದ್ದರಿಂದ ಜನ ಜೀವನ ಸ್ಥಬ್ದಗೊಂಡಿತ್ತು, ಇದರಿಂದ ದಿನನಿತ್ಯ ಕನಿಷ್ಠ 175 ಕೋಟಿ ರು. ನಷ್ಟಉಂಟಾಗಿದೆ ಎಂದು ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ತಿಳಿಸಿದೆ. ನಿಷೇಧಾಜ್ಞೆಯಿಂದಾಗಿ ಬೇಕರಿ ಹಾಗೂ ಜಾನುವಾರು ಉದ್ಯಮಿಗಳು ಹೆಚ್ಚಿನ ತೊಂದರೆ ಅನುಭವಿಸಿದ್ದು, ಜನ ಮನೆಯಿಂದ ಹೊರಗೆ ಬಾರದೆ ಇದ್ದುದ್ದು ಹಾಗೂ ಅವುಗಳಿಗೆ ಕಡಿಮೆ ಬಾಳಿಕೆ ಇರುವುದರಿಂದ ಸುಮಾರು 200 ಕೋಟಿ ಕಳೆದುಕೊಂಡಿದ್ದಾರೆ ಎಂದು ಮಂಡಳಿ ಹೇಳಿದೆ.
ಬಕ್ರೀದ್ ವೇಳೆಯಲ್ಲೇ ನಿಷೇಧಾಜ್ಞೆ ಇದ್ದಿದ್ದರಿಂದ ಆಡು, ಕುರಿ ಹಾಗೂ ಮೇಕೆ ಮಾರಾಟ ಭಾರೀ ಕುಸಿತ ಕಂಡಿದೆ.