ಬಂಧನ ಭೀತಿಯಲ್ಲಿ ತಡ ರಾತ್ರಿ ಜಡ್ಜ್ ಮನೆ ಕದ ಬಡಿದ ಚಿದು ಪುತ್ರನಿಗೆ ಜಾಮೀನು
ಹಲವು ಪ್ರಕರಣಗಳಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ, ಶನಿವಾರ ತಡರಾತ್ರಿ ಜಾಮೀನು ಪಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಚೆನ್ನೈ: ಹಲವು ಪ್ರಕರಣಗಳಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ, ಶನಿವಾರ ತಡರಾತ್ರಿ ಜಾಮೀನು ಪಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಅಕ್ರಮ ಹಣ ಕಾಯ್ದೆಯಡಿ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ 3 ಬಾರಿ ಕಾರ್ತಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಆದರೆ ಮೂರೂ ಬಾರಿ ಕಾರ್ತಿ ವಿಚಾರಣೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಯ್ದೆ ಅನ್ವಯ ಕಾರ್ತಿಯನ್ನು ಸಂಬಂಧಪಟ್ಟಅಧಿಕಾರಿ ಮುಂದೆ ವಿಚಾರಣೆಗೆ ಹಾಜರುಪಡಿಸುವಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ವಾರಂಟ್ ಜಾರಿ ಮಾಡಿದ್ದರು.
ಇದರಿಂದಾಗಿ ಲಂಡನ್ಗೆ ತೆರಳಲು ಸಜ್ಜಾಗಿದ್ದ ಕಾರ್ತಿ ಬಂಧನದ ಭೀತಿಗೆ ಒಳಗಾಗಿ ಶನಿವಾರ ರಾತ್ರಿ ನ್ಯಾ. ಎ.ಡಿ.ಜಗದೀಶ್ ಚಂದ್ರಾ ಅವರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ರಾತ್ರಿ 11.30ರ ವೇಳೆಗೆ ತಮ್ಮ ಮನೆಯಲ್ಲೇ ವಿಚಾರಣೆ ನಡೆಸಿದ ನ್ಯಾಯಾಧೀಶರು ಕಾರ್ತಿಗೆ ನಿರೀಕ್ಷಣಾ ಜಾಮೀನು ನೀಡಿದರು.