ಸವಾಲನ್ನು ಎದುರಿಸುತ್ತಲೇ ಬಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಇದೀಗ ಸವಾಲೊಂದು ಎದುರಾಗಿದೆ. ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗುತ್ತಿದ್ದು ಇದು ಅಕ್ಷರಶಃ ಅಗ್ನಿಪರೀಕ್ಷೆಯಾಗಿದೆ. 

ಬೆಂಗಳೂರು :  ಸವಾಲನ್ನು ಎದುರಿಸುತ್ತಲೇ ಬಂದಿರುವ ಎ.ಡಿ. ಕುಮಾರಸ್ವಾಮಿ ನೆತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಸೋಮವಾರ (ಡಿ.10) ದಿಂದ ವೇಣು ಗ್ರಾಮ ಬೆಳಗಾವಿಯ ಸುವರ್ಣ ಸೌಧದಲ್ಲಿ 10 ದಿನಗಳ ಕಾಲ ನಡೆಯಲಿರುವ ವಿಧಾನ ಮಂಡಲ ಅವೇಶನ ಅಕ್ಷರಶಃ ಅಗ್ನಿಪರೀಕ್ಷೆ.

Add Asianetnews Kannada as a Preferred SourcegooglePreferred

ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ನಂತರದ ಆರು ತಿಂಗಳಲ್ಲಿ ಮೂರು ವಿಧಾನ ಮಂಡಲ ಅವೇಶನಗಳನ್ನು ಎದುರಿಸಿದ್ದಾರೆ. ಆರಂಭದ ಈ ಅವೇಶನಗಳ ವೇಳೆ ಸರ್ಕಾರದ ಸಾಧನೆಗೆ ಇನ್ನಷ್ಟು ಸಮಯ ಬೇಕು ಎಂಬ ಸಬೂಬು ಇತ್ತು. ಇದು ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಿದಂತಹ ಪ್ರತಿಪಕ್ಷಗಳನ್ನು ಕಟ್ಟಿಹಾಕುತ್ತಿದೆ. ಆದರೆ, ಈ ಬಾರಿ ಪರಿಸ್ಥಿತಿ ಸಂಪೂರ್ಣ ವಿರುದ್ಧವಿದೆ. ಸರ್ಕಾರವನ್ನು ಕಾಡಲು ವಿಧಾನಮಂಡಲದ ಒಳಗೆ ಹಾಗೂ ಹೊರಗೆ ಸಾಕಷ್ಟು ಗಂಭೀರ ವಿಚಾರಗಳಿವೆ. 

ಸರ್ಕಾರದ ಆಶ್ವಾಸನೆಗಳನ್ನು ಒಪ್ಪದ ಕಬ್ಬು ಬೆಳೆಗಾರರು ಸುವರ್ಣ ಸೌಧದ ಹೊರಗೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದೇ ಸುವರ್ಣ ಸೌಧದ ಮುಂದೆ ಸಿದ್ದರಾಮಯ್ಯ ಅವರ ಅವಧಿಯಲ್ಲಿ ರೈತ ವಿಠಲ ಅರಭಾವಿ ಆತ್ಮಹತ್ಯೆ ಮಾಡಿಕೊಂಡ ಕಳಂಕ ಇನ್ನೂ ಕಳೆದು ಹೋಗಿಲ್ಲ. ಈ ಬಾರಿಯೂ ರೈತರು ಉಗ್ರ ಪ್ರತಿಭಟನೆ ನಡೆಸುವ ಸೂಚನೆಯಿದ್ದು, ಇದಕ್ಕೆ ಪ್ರತಿಪಕ್ಷ ಬಿಜೆಪಿ ಸಹ ಇಂಬು ನೀಡಿದೆ.

ಇನ್ನು ಸದನ ಒಳಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹಲವು ವಿಚಾರಗಳು ಇವೆ. ರಾಜ್ಯದ ಸಂಪನ್ಮೂಲದ ಬಹುಭಾಗ ವನ್ನು ಬೇಡುವ ರೈತರ ಸಾಲ ಮನ್ನಾ ಎಂಬ ಹೊರೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ತಾವಾಗಿಯೇ ತಲೆಕೊಟ್ಟ ಕಾರಣ ಸಮಗ್ರ ಅಭಿವೃದ್ಧಿ ಎಂಬ ಸವಾಲಿನತ್ತ ಹೆಜ್ಜೆ ಹಾಕಲು ಸಾಧ್ಯವಾಗಿಲ್ಲ ಎಂದು ದೂರಲಾಗುತ್ತಿದೆ.

ನಾಡಿನ ಬಹುಭಾಗ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಬರದಿಂದ ತತ್ತರಿಸಿದೆ. ಈ ಬಗ್ಗೆ ಸರ್ಕಾರ ಸಮರ್ಪಕ ಪ್ರಯತ್ನ ನಡೆಸಿಲ್ಲ ಎಂದು ಬಿಂಬಿಸಲು ಬಿಜೆಪಿ ಈಗಾಗಲೇ ಸಾಕಷ್ಟು ಕಸರತ್ತು ನಡೆಸಿದೆ.