ಬಿಜೆಪಿಯ ಪ್ರಭಾವಿ ಶಾಸಕನಿಗೆ ಬಂಧನದ ಭೀತಿ..!
- ಬಿಜೆಪಿ ಶಾಸಕನ ವಿರುದ್ಧ ವಾರಂಟ್ ಹೊರಡಿಸಿದ ಬೆಂಗಳೂರಿನ ವಿಶೇಷ ನ್ಯಾಯಾಲಯ
- 2016 ರಲ್ಲಿ ನಡೆದಿದ್ದ ಗಲಾಟೆ; ಶಾಸಕನ ವಿರುದ್ಧ ದಾಖಲಾಗಿತ್ತು ಜಾತಿ ನಿಂದನೆ ದೂರು
ಬೆಂಗಳೂರು: 2016ರಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ವಿಶೇಷ ನ್ಯಾಯಾಲಯವು ಬಿಜೆಪಿ ಶಾಸಕ ಪಿ.ರಾಜೀವ್ ವಿರುದ್ಧ ಬಂಧನದ ವಾರಂಟ್ ಹೊರಡಿಸಿದೆ.
ಮಾಜಿ ಶಾಸಕ ಶಾಮಘಾಟ್ ಅವರಿಗೆ ಅವ್ಯಾಚ ಶಬ್ಧಗಳಿಂದ ಜಾತಿ ನಿಂದನೆ ಆರೋಪದ ಮೇಲೆ, ಶಾಸಕ ಪಿ.ರಾಜೀವ್ ಸೇರಿದಂತೆ ಅವರ ಬೆಂಬಲಿಗರ ವಿರುದ್ಧ ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ ವಿಚಾರಣೆಗೆ ಹಾಜರಾಗದ ಶಾಸಕ ರಾಜೀವ್ ವಿರುದ್ಧ ಇದೀಗ ಬೆಂಗಳೂರಿನ ವಿಶೇಷ ಕೋರ್ಟ್ ವಾರಂಟ್ ಹೊರಡಿಸಿದೆ.
ಏನಿದು ಪ್ರಕರಣ:
ಶಾಸಕ ಪಿ.ರಾಜೀವ್ ಸಕ್ಕರೆ ಕಾರ್ಖಾನೆಗಳಿಂದ ಹಣ ಪಡೆದು ರೈತರ ಪರವಾಗಿ ನಿಲ್ಲುವುದನ್ನು ಬಿಟ್ಟಿದ್ದಾರೆ ಎಂದು ಕುಡಚಿ ಕ್ಷೇತ್ರದ ಮಾಜಿ ಶಾಸಕ ಶಾಮ ಘಾಟಗೆ 2016ರಲ್ಲಿ ಆರೋಪ ಮಾಡಿದ್ದರು. ಅದಕ್ಕೆ ಪ್ರತಿಯಾಗಿ, ಆ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಲು ಶಾಸಕ ರಾಜೀವ್ ನೇರವಾಗಿ ಶಾಮ ಘಾಟಗೆ ಮನೆಗೆ ಹೋಗಿದ್ದರು. ಆ ವೇಳೆ, ಶಾಮ ಘಾಟಗೆ ಮನೆಯಲ್ಲಿ ಇಲ್ಲದಿದ್ದರೂ, ಕುಟುಂಬ ಸದಸ್ಯರೊಂದಿಗೆ ಪಿ. ರಾಜೀವ್ ವಾಗ್ವಾದ ನಡೆದಿತ್ತು. ಬಳಿಕ ಶಾಸಕ ಪಿ.ರಾಜೀವ್ ಸೇರಿದಂತೆ ಅವರ ಬೆಂಬಲಿಗರ ವಿರುದ್ಧ ಘಾಟಗೆ ಕುಟುಂಬ ಕುಡಚಿ ಪೊಲೀಸ್ ಠಾಣೆಯಲ್ಲಿ ಅವ್ಯಾಚ ಶಬ್ಧಗಳಿಂದ ನಿಂದನೆ ಸೇರಿದಂತೆ ಜಾತಿ ನಿಂದನೆ ಪ್ರಕರಣ ದಾಖಲಿಸಿತ್ತು.
ಪ್ರಕರಣ ದಾಖಲಾದರೂ, ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯ ಇದೀಗ ವಾರಂಟ್ ಜಾರಿ ಮಾಡಿದೆ.