ಅಭ್ಯರ್ಥಿಗಳ ಆಯ್ಕೆಗಾಗಿ ಉಪ್ಪಿಯಿಂದ 50 ಮಂದಿ ಸಂದರ್ಶನ
ರಾಜ್ಯ ವಿಧಾನಸಭಾ ಚುನಾವಣಾ ಕಣಕ್ಕಿಳಿದಿರುವ ಖ್ಯಾತ ನಟ ಉಪೇಂದ್ರ ನೇತೃತ್ವದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷವು (ಕೆಪಿಜೆಪಿ) ತನ್ನ ಅಭ್ಯರ್ಥಿಗಳ ಆಯ್ಕೆಗಾಗಿ ನಟಿ, ನಿರ್ದೇಶಕಿ ರೂಪಾ ಅಯ್ಯರ್ ಸೇರಿದಂತೆ ಸುಮಾರು 50 ಮಂದಿಯನ್ನು ಸಂದರ್ಶನ ಮಾಡಿದೆ.
ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಕಣಕ್ಕಿಳಿದಿರುವ ಖ್ಯಾತ ನಟ ಉಪೇಂದ್ರ ನೇತೃತ್ವದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷವು (ಕೆಪಿಜೆಪಿ) ತನ್ನ ಅಭ್ಯರ್ಥಿಗಳ ಆಯ್ಕೆಗಾಗಿ ನಟಿ, ನಿರ್ದೇಶಕಿ ರೂಪಾ ಅಯ್ಯರ್ ಸೇರಿದಂತೆ ಸುಮಾರು 50 ಮಂದಿಯನ್ನು ಸಂದರ್ಶನ ಮಾಡಿದೆ.
ಈಗಾಗಲೇ ಮೊದಲ ಸುತ್ತಿನ ಸಂದರ್ಶನ ಮುಗಿಸಲಾಗಿದ್ದು, ಎರಡನೇ ಸುತ್ತಿನ ಸಂದರ್ಶನವನ್ನು ಶುಕ್ರವಾರ ಉಪೇಂದ್ರ ಅವರು ಖುದ್ದಾಗಿ ಸಂದರ್ಶನ ನಡೆಸಿದ್ದಾರೆ. 50 ಮಂದಿಯ ಪೈಕಿ ಚಲನಚಿತ್ರದ ಕಲಾವಿದರು ಸೇರಿದಂತೆ ಸಾಮಾನ್ಯ ಜನರನ್ನು ಸಹ ಸಂದರ್ಶಿಸಲಾಗಿದೆ. ಮೊದಲ ಸುತ್ತಿನಲ್ಲಿ ಸುಮಾರು 120 ಮಂದಿಯನ್ನು ಸಂದರ್ಶಿಸಿ ಆಯ್ಕೆಯ ಪ್ರಕ್ರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಎರಡನೇ ಸುತ್ತಿನಲ್ಲಿ ಸಂದರ್ಶಿಸಿರುವ 50 ಮಂದಿಯ ಫೋಟೋಗಳನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಫೇಜ್ನಲ್ಲಿ ಪ್ರಕಟಿಸಿದ್ದಾರೆ. ಆಟೋ ಚಾಲಕರು, ಶಿಕ್ಷಕರು, ಗೃಹಿಣಿಯರು, ಸಿನಿಮಾ ರಂಗದವರು ಸೇರಿದಂತೆ ಎಲ್ಲಾ ವರ್ಗದ ಸಾಮಾನ್ಯ ಜನರಿಗೆ ಪಕ್ಷದ ವತಿಯಿಂದ ಟಿಕೆಟ್ ನೀಡಲು ನಿರ್ಧರಿಸಲಾಗಿದೆ.
ಹೀಗಾಗಿ ಉಪೇಂದ್ರ ಅವರು ಎಲ್ಲಾ ವರ್ಗದ ಜನರನ್ನು ಸಂದರ್ಶಿಸಿ ಅವರ ಆಕಾಂಕ್ಷೆ ಮತ್ತು ಸೇವಾ ಮನೋಭಾವದ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರದಲ್ಲಿಯೂ ಪ್ರಜಾಕೀಯ ಸಿದ್ಧಾಂತ ಮೂಲಕ ಸ್ಪರ್ಧಿಸಲು ಉಪೇಂದ್ರ ಅವರು ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಸಿದ್ದತೆ ನಡೆಸಿದ್ದು, ಹಲವು ಪ್ರಜ್ಞಾವಂತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.