ರಾಜ್ಯದಲ್ಲಿ ಮುಂದಿನ ನಾಲ್ಕು ದಿನದಲ್ಲಿ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

 ಬೆಂಗಳೂರು : ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಒಳನಾಡಿನ ಕೆಲ ಭಾಗದಲ್ಲಿ ಆ.13ರಿಂದ 17ರವರೆಗೆ ಮುಂಗಾರು ಪ್ರಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Add Asianetnews Kannada as a Preferred SourcegooglePreferred

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ (ಕೆಎಸ್‌ಎನ್‌ಡಿಎಂಸಿ) ಜಿ.ಎಸ್‌. ಶ್ರೀನಿವಾಸ್‌ ರೆಡ್ಡಿ ಮಾತನಾಡಿ, ಸದ್ಯ ಒಡಿಶಾದಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಅರಬ್ಬಿ ಸಮುದ್ರದಲ್ಲಿ ಮತ್ತೆ ಮುಂಗಾರು ಮಾರುತಗಳು ಸಕ್ರಿಯವಾಗಿವೆ. ಹಾಗಾಗಿ ಕಳೆದೆರಡು ದಿನಗಳಿಂದ ಕೇರಳ ಮತ್ತು ಕರ್ನಾಟಕದ ಕರಾವಳಿ, ಮಲೆನಾಡಿನ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಆ.13 ವರೆಗೆ ಒಳನಾಡಿನಲ್ಲಿ ಚದುರಿದ ಮಳೆ ಮುಂದುವರೆಯಲಿದ್ದು, ಬಳಿಕ ಸ್ವಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡು ಬರಲಿದೆ. ಮಲೆನಾಡಿಗೆ ಹೊಂದಿಕೊಂಡಿರುವ ಶಿವಮೊಗ್ಗ, ಧಾರವಾಡ, ಬೆಳಗಾವಿ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆ ಬೀಳಲಿದೆ ಎಂದು ತಿಳಿಸಿದ್ದಾರೆ.

ಆದರೆ, ಮುಂಗಾರು ಮಾರುತಗಳು ಪ್ರಬಲವಾಗಿಲ್ಲ. ಹಾಗಾಗಿ, ಮಲೆನಾಡು ಮತ್ತು ಕರಾವಳಿ ಘಟ್ಟಪ್ರದೇಶವನ್ನು ದಾಟಿ ಒಳನಾಡು ಪ್ರದೇಶವನ್ನು ಪ್ರವೇಶ ಮಾಡುತ್ತಿಲ್ಲ. ಹೀಗಾಗಿ ಒಳನಾಡ ಭಾಗದಲ್ಲಿ ಮಳೆ ಕಡಿಮೆಯಾಗಿದೆ ಎಂದು ಶ್ರೀನಿವಾಸ್‌ ರೆಡ್ಡಿ ವಿವರಿಸಿದರು.