Asianet Suvarna News Asianet Suvarna News

ಸಾರಾ ವಿರುದ್ಧ ವಿಶ್ವನಾಥ್‌ ‘ಬ್ಲೂಫಿಲ್ಮ್‌’ ದಾಳಿ!

ಸಾರಾ ವಿರುದ್ಧ ವಿಶ್ವನಾಥ್‌ ‘ಬ್ಲೂಫಿಲ್ಮ್‌’ ದಾಳಿ!| ಮುಡಾ ಅಧ್ಯಕ್ಷರ ಮನೆಯಲ್ಲಿ ತಟ್ಟೆತೊಳೆದುಕೊಂಡಿದ್ದರು| ಅವರನ್ನು ಒಂದು ಕಾಲದಲ್ಲಿ ಬ್ಲೂಫಿಲ್ಮ್‌ ಮಹೇಶ ಎಂದು ಕರೀತಿದ್ದರು| ವಿಧಾನಸಭೆಯಲ್ಲಿ ಮಾಡಿದ ವಾಗ್ದಾಳಿಗೆ ಮುಂಬೈನಿಂದ ಜೆಡಿಎಸ್‌ ಅತೃಪ್ತ ಶಾಸಕ ತಿರುಗೇಟು| ‘ಸಾರಾ ಮಹೇಶ್‌ ಮುಖ್ಯಮಂತ್ರಿಯ ದುಡ್ಡಿನ ದಲ್ಲಾಳಿ’

Karnataka Political Crisis H Vishwanath Calls Sara Mahesh Blue Film Boy
Author
Bangalore, First Published Jul 22, 2019, 8:15 AM IST

ಬೆಂಗಳೂರು[ಜು.22]: ವಿಧಾನಸಭೆಯಲ್ಲಿ ತಮ್ಮ ವಿರುದ್ಧ ಆರೋಪ ಮಾಡಿರುವ ಸಚಿವ ಸಾ.ರಾ. ಮಹೇಶ್‌ ವಿರುದ್ಧ ತೀವ್ರ ವಾಗ್ದಾಳಿ ಮಾಡಿರುವ ಜೆಡಿಎಸ್‌ ಅತೃಪ್ತ ಶಾಸಕ ಎಚ್‌. ವಿಶ್ವನಾಥ್‌, ಹಿಂದೆ ಮುಡಾ ಅಧ್ಯಕ್ಷರಾಗಿದ್ದ ಗೋವಿಂದರಾಜು ಮನೆಯಲ್ಲಿ ತಟ್ಟೆತೊಳೆದುಕೊಂಡು ಇದ್ದವರು ಈಗ ನಮಗೆ ಪಾಠ ಹೇಳುತ್ತಾರೆ. ಅವರನ್ನು ಒಂದು ಕಾಲದಲ್ಲಿ ‘ಬ್ಲೂ ಫಿಲ್ಮ್‌’ ಮಹೇಶ ಎಂದು ಕರೆಯುತ್ತಿದ್ದರು. ಇದೆಲ್ಲವೂ ಜನರಿಗೆ ಗೊತ್ತಿದೆ ಎಂದು ಕಟುವಾಗಿ ಟೀಕಿಸಿದ್ದಾರೆ

ಭಾನುವಾರ ಮುಂಬೈನಿಂದ ಖಾಸಗಿ ಸುದ್ದಿವಾಹಿನಿಗಳೊಂದಿಗೆ ಮಾತನಾಡಿದ ಅವರು, ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷರನ್ನಾಗಿ ಮಾಡಲು ನಮ್ಮೂರಿನ ಹುಡುಗನ ಬಳಿ ಎಷ್ಟುಕೋಟಿ ರು. ಪಡೆದಿದ್ದಾರೆ ಎಂಬುದನ್ನು ಸಚಿವ ಸಾ.ರಾ. ಮಹೇಶ್‌ ತಮ್ಮ ಮಕ್ಕಳ ಮೇಲೆ ಆಣೆ ಮಾಡಿ ಹೇಳಬೇಕು. ಮುಖ್ಯಮಂತ್ರಿಯ ದುಡ್ಡಿನ ದಲ್ಲಾಳಿಯಾಗಿರುವ ಮಹೇಶ್‌ ಯಾರಿಂದ ಎಷ್ಟುಹಣ ಪಡೆದು ಮುಖ್ಯಮಂತ್ರಿಗೆ ನೀಡಿದ್ದೇನೆ ಎಂಬುದನ್ನು ರಾಜ್ಯದ ಜತೆಗೆ ತಿಳಿಸಬೇಕು ಎಂದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಹೇಶ್‌ ಅವರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡ ವಿಶ್ವನಾಥ್‌, ಸಾ.ರಾ.ಮಹೇಶ್‌ ಅವರಿಂದ ಕಲಿಯುವುದು ಏನೂ ಇಲ್ಲ. ನಮ್ಮ ಹಿನ್ನೆಲೆ ಏನು? ಅವರ ಹಿನ್ನೆಲೆ ಏನು? ಕೃಷಿಕನ ಮನೆಯಲ್ಲಿ ಹುಟ್ಟಿಲಾಯರ್‌ ಆಗಿ ಶಾಸಕನಾಗಿ ಮಂತ್ರಿಯಾಗಿ ಸಾರ್ವಜನಿಕರ ಸೇವೆ ಮಾಡಿದವನು ನಾನು. ಜನರು ನೀಡಿದ ಅವಕಾಶದಿಂದ ಪ್ರಾಮಾಣಿಕ ರಾಜಕಾರಣ ಮಾಡಿದ್ದೇನೆ ಎಂದು ಹೇಳಿದರು.

ರಾಮಲಿಂಗಾರೆಡ್ಡಿ ರಿವರ್ಸ್‌ ಗೇರು:

ರಾಜೀನಾಮೆಗೂ ಪೂರ್ವದಲ್ಲಿ ಶಾಸಕ ರಾಮಲಿಂಗಾರೆಡ್ಡಿ ಅವರ ಮನೆಯಲ್ಲೇ ಕುಳಿತು ಚರ್ಚೆ ಮಾಡಲಾಗಿತ್ತು. ನಾವು ಎಚ್ಚರದಿಂದ ಹುಷಾರಾಗಿರಬೇಕು. ಈ ಮೈತ್ರಿ ಸರ್ಕಾರ ಬೀಳಿಸಬೇಕು ಎಂದು ಅವರೇ ಹೇಳಿದ್ದರು. ಈಗ ಇದ್ದಕ್ಕಿದ್ದ ಹಾಗೆ ರಿವರ್ಸ್‌ ಗೇರ್‌ ಹಾಕಿದ್ದಾರೆ. ರಾಮಲಿಂಗಾರೆಡ್ಡಿ ಮತ್ತು ನಾನು ಹಲವು ವರ್ಷಗಳಿಂದ ರಾಜಕೀಯ ಮಾಡಿದ್ದೇವೆ. ಈಗ ಏಕಾಏಕಿ ಉಲ್ಟಾಹೊಡೆಯಲು ಕಾರಣ ಏನೆಂಬುದು ತಿಳಿಯಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಎರಡು ದಿನದಲ್ಲಿ ಬೆಂಗಳೂರಿಗೆ

ಇನ್ನೆರಡು ದಿನಗಳಲ್ಲಿ ನಾವೆಲ್ಲ ಬೆಂಗಳೂರಿಗೆ ಬರುತ್ತೇವೆ. ವಿಶ್ವಾಸ ಮತಯಾಚನೆಯಲ್ಲಿ ನಾವು ಭಾಗಿಯಾಗುವುದಿಲ್ಲ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬೆಂಗಳೂರಿಗೆ ಬರುತ್ತೇವೆ. ರಾಕ್ಷಸ ರಾಜಕಾರಣದ ವಿರುದ್ಧ ನಾವೆಲ್ಲಾ ಮುಂಬೈಗೆ ಬಂದಿದ್ದೇವೆ. ಸ್ವಂತಕ್ಕಾಗಿ ಇಡೀ ಸದನವನ್ನೇ ಬಳಸಿಕೊಳ್ಳಲಾಗುತ್ತಿದೆ. ಅನಾಯಾಸವಾಗಿ ಬಂದ ಅವಕಾಶವನ್ನು ಯಾರೋ ಮೂರ್ನಾಲ್ಕು ಜನ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ವಿಶ್ವನಾಥ್‌ ಹೇಳಿದರು.

ಸ್ಪೀಕರ್‌ ನಡೆ ಅಸಮಾಧಾನ ತಂದಿದೆ:

ಕಳೆದ 40 ವರ್ಷಗಳಲ್ಲಿ ಹಲವು ಸ್ಪೀಕರ್‌ಗಳನ್ನು ನೋಡಿದ್ದೇನೆ. ನಾನು ಹಾಗೂ ಸ್ಪೀಕರ್‌ ರಮೇಶ್‌ ಕುಮಾರ್‌ ಒಟ್ಟಿಗೆ ವಿಧಾನಸಭೆ ಪ್ರವೇಶಿಸಿದವರು. ದಿವಂಗತ ದೇವರಾಜ ಅರಸು ಕೃಪೆಯಿಂದ ಶಾಸಕರಾದವರು. ಅವರಿಂದ ದೀಕ್ಷೆ ಪಡೆದು ರಾಜಕಾರಣ ಆರಂಭಿಸಿದವರು. ಆದರೆ ಇವತ್ತು ಸ್ಪೀಕರ್‌ ರಮೇಶ್‌ ಕುಮಾರ್‌ ನಡೆ ಅರ್ಥವಾಗುತ್ತಿಲ್ಲ. ಅವರು ಏಕೆ ಹೀಗೆ ಆಗಿಬಿಟ್ಟರು ಎಂದು ಗೊತ್ತಿಲ್ಲ. ಸದನದ ಸದಸ್ಯ ಗೈರಾಗಿದ್ದರೆ ಆತನ ಬಗ್ಗೆ ಮಾತನಾಡಲು ಯಾರಿಗೂ ಅವಕಾಶ ನೀಡಬಾರದು. ಆದರೆ, ಸ್ಪೀಕರ್‌ ಅವರೇ ಗೈರಾದವರ ಬಗ್ಗೆ ಮಾತನಾಡಲು ಸಮಯ ನೀಡಿದ್ದಾರೆ. ಆ ಮಾತುಗಳು ರೆಕಾರ್ಡ್‌ ಆಗಲು ಅವಕಾಶ ನೀಡಿದ್ದಾರೆ. ಸದನದ ನಿಯಮದ ಪ್ರಕಾರ ಹಾಗೆ ಮಾಡುವಂತಿಲ್ಲ ಎಂದು ಸ್ಪೀಕರ್‌ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ತಮ್ಮ ವಿರುದ್ಧ ಸಾ.ರಾ.ಮಹೇಶ್‌ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಸದನಲ್ಲಿ ಯಾರ ಮೇಲೆ ಏನು ಬೇಕಾದರೂ ಆರೋಪ ಮಾಡಬಹುದು. ಆದರೆ, ಕೋರ್ಟ್‌ಗೆ ಹೋಗಲು ಅವಕಾಶವಿಲ್ಲ. ಅದನ್ನು ತಿಳಿದುಕೊಂಡೇ ಸಾ.ರಾ.ಮಹೇಶ ತಮ್ಮ ವಿರುದ್ಧ ಆರೋಪ ಮಾಡಿದ್ದಾರೆ. ಸದನ ಮತ್ತು ಸಾರ್ವಜನಿಕರನ್ನು ನಂಬಿಸಲು ತಾಯಿ, ಮಕ್ಕಳು ಹಾಗೂ ದೇವರ ಆಣೆ ಮಾಡಿದ್ದಾರೆ ಎಂದು ಪುನರುಚ್ಚರಿಸಿದರು.

ಮುಡಾ ಅಧ್ಯಕ್ಷರನ್ನಾಗಿ ಮಾಡಲು ನಮ್ಮೂರ ಹುಡುಗನ ಬಳಿ ಎಷ್ಟುಕೋಟಿ ಪಡೆದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಯಾರು, ಎಷ್ಟುಹಣ ಕೊಟ್ಟಿದ್ದಾರೆ ಎಂಬುದನ್ನು ಸಂದರ್ಭ ಬಂದಾಗ ಬಹಿರಂಗ ಪಡಿಸುತ್ತೇನೆ.

Follow Us:
Download App:
  • android
  • ios