ಕೈ ಸಭೆಗೆ ಐವರು ಶಾಸಕರು ಗೈರು : ಬಿಜೆಪಿ ಸಂಪರ್ಕದಲ್ಲಿರುವ ಶಂಕೆ
ರಾಜೀನಾಮೆ ನೀಡಿದವರ ಹೊರತಾಗಿ ಐವರು ಕಾಂಗ್ರೆಸ್ ಶಾಸಕರು ಸಿಎಲ್ ಪಿ ಸಭೆಗೆ ಗೈರಾಗಿದ್ದು, ಇದಕ್ಕೆ ಅನಾರೋಗ್ಯದ ಕಾರಣ ನೀಡಿದ್ದಾರೆ. ಆದರೆ ಇವರೆಲ್ಲಾ ಬಿಜೆಪಿ ಸಂಪರ್ಕದಲ್ಲಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ಚಿಕ್ಕಮಗಳೂರು [ಜು.09] : ರಾಜ್ಯ ರಾಜಕಾರಣದಲ್ಲಿ ಹೈ ಡ್ರಾಮಾ ನಡೆಯುತ್ತಿದೆ. ಶಾಸಕ, ಸಚಿವರ ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಕೈ ಶಾಸಕಾಂಗ ಸಭೆ ಕರೆಯಲಾಗಿದ್ದು, ಈ ಸಭೆಗೆ ಕೆಲ ಶಾಸಕರು ಅನಾರೋಗ್ಯದ ಕಾರಣ ನೀಡಿ ಗೈರಾಗಿದ್ದಾರೆ.
"
ಉಜಿರೆಯಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಭೆಗೆ ಗೈರಾಗಿದ್ದಾಗಿ ಶೃಂಗೇರಿ ಶಾಸಕ ರಾಜೇಗೌಡ ಹೇಳಿದ್ದಾರೆ. ಈ ಬಗ್ಗೆ ಕೈ ಮುಖಂಡ ಸಿದ್ದರಾಮಯ್ಯಗೆ ಮಾಹಿತಿ ನೀಡಿದ್ದು, ದೂರವಾಣಿಯಲ್ಲಿ ಸ್ಪಷ್ಟಪಡಿಸಿದ್ದೇನೆ ಎಂದಿದ್ದಾರೆ. ನಾಲ್ಕು ದಿನದಿಂದ ಪ್ರಕೃತಿ ಚಿಕಿತ್ಸೆ ನಡೆಯುತ್ತಿದ್ದು, ಸಭೆಯಿಂದ ದೂರ ಉಳಿದಿದ್ದಕ್ಕೆ ರಾಜೇಗೌಡ ಕಾರಣ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್, ತುಕಾರಾಂ, ಹರಿಹರ ಶಾಸಕ ರಾಮಪ್ಪ ಕೂಡ ಸಭೆಗೆ ಗೈರಾಗಿದ್ದು, ಇವರ ಗೈರು ಹಾಜರಿ ಬಗ್ಗೆ ಹಿರಿಯ ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದ ನೆಪವೊಡ್ಡಿದವರು ಬಿಜೆಪಿ ಜೊತೆ ಸಂಪರ್ಕದಲ್ಲಿರುವ ಬಗ್ಗೆ ಶಂಕಿಸಿದ್ದಾರೆ.