ಗಣೇಶ ಹಬ್ಬಕ್ಕೆ ರೈತರಿಗೆ ಮತ್ತೊಂದು ಸೂಪರ್ ಬಂಪರ್ ಕೊಡುಗೆ
ಒಂದು ಕುಟುಂಬಕ್ಕೆ ಸಾಲ ಮನ್ನಾ ಎಂಬ ನಿಯಮವನ್ನು ಸಡಿಸಲು ಸಂಪುಟ ಸಭೆ ನಿರ್ಧರಿಸಲಿದೆ. ಚಾಲ್ತಿ ಸಾಲದ ಮನ್ನಾ ಪ್ರಕ್ರಿಯೆ ಈಗಿನಿಂದಲೇ ಜಾರಿಗೆ ಬಂದಿದೆ. ಯಾರಿಂದಾದರೂ ಒತ್ತಾಯದ ಮರುಪಾವತಿ ಮಾಡಿಸಲ್ಪಟ್ಟಿದ್ದವರಿಗೂ ಚಾಲ್ತಿ ಸಾಲ ಮನ್ನಾ ಅನ್ವಯವಾಗುತ್ತದೆ
ಬೆಂಗಳೂರು[ಆ.10]: ಯಾವ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಅನ್ನದಾತರಿಗೆ ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣೇಶ ಹಬ್ಬಕ್ಕೆ ಇನ್ನೊಂದು ಕೊಡುಗೆ ನೀಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರನ್ನು ಸಂತೃಪ್ತಿಪಡಿಸುತ್ತೇನೋ ಗೊತ್ತಿಲ್ಲ. ನಾನು ಬಿಜೆಪಿ ನಾಯಕರನ್ನು ಸಂತೃಪ್ತಿಪಡಿಸಬೇಕಲ್ಲವೇ ಎಂದ ಪ್ರಶ್ನಿಸಿದ ಸಿಎಂ,ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾ ತಪ್ಪಿಸಲು ಕೆಲವರು ದೆಹಲಿಯಲ್ಲಿ ಅಲ್ಲಿ ಇಲ್ಲಿ ಓಡಾಡುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಯಾರೋ ಮಾತಾಡುವುದಕ್ಕೆ ನಾನು ಉತ್ತರ ಕೊಡಲು ಹೋಗಲ್ಲ ಎಂದರು.
ಒಂದು ಕುಟುಂಬಕ್ಕೆ ಮಾತ್ರ ಸಾಲ ಮನ್ನಾ ಎಂಬ ನಿಯಮ ಬದಲು
ಒಂದು ಕುಟುಂಬಕ್ಕೆ ಸಾಲ ಮನ್ನಾ ಎಂಬ ನಿಯಮವನ್ನು ಸಡಿಸಲು ಸಂಪುಟ ಸಭೆ ನಿರ್ಧರಿಸಲಿದೆ. ಚಾಲ್ತಿ ಸಾಲದ ಮನ್ನಾ ಪ್ರಕ್ರಿಯೆ ಈಗಿನಿಂದಲೇ ಜಾರಿಗೆ ಬಂದಿದೆ. ಯಾರಿಂದಾದರೂ ಒತ್ತಾಯದ ಮರುಪಾವತಿ ಮಾಡಿಸಲ್ಪಟ್ಟಿದ್ದವರಿಗೂ ಚಾಲ್ತಿ ಸಾಲ ಮನ್ನಾ ಅನ್ವಯವಾಗುತ್ತದೆ ಎಂದು ತಿಳಿಸಿದರು.
ಸಹಕಾರ ಸಂಸ್ಥೆಗಳ ಸಾಲ ಮನ್ನಾ ಯೋಜನೆಗೆ ಸರ್ಕಾರದ ಮಾರ್ಪಡಿಸಿದ ಕೆಲವು ನಿಯಮಗಳು
1] ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾ.ಪ್ಸ್, ಡಿಸಿಸಿ ಬ್ಯಾಂಕುಗಳು ಮತ್ತು ಪಿಕಾರ್ಡ್ ಬ್ಯಾಂಕುಗಳು ವಿತರಿಸಿದ ಅಲ್ಪಾವಧಿ ಬೆಳೆ ಸಾಲಗಳಲ್ಲಿ 2010ರ ಜುಲೈ 10ಕ್ಕೆ ಹೊಂದಿಕೊಂಡ ಹೊರ ಬಾಕಿ ಸಾಲಕ್ಕೆ ಅನ್ವಯ
2] ಜು.10, 2010,ಕ್ಕೆ ಸಾಲದ ಹೊರಬಾಕಿಯಲ್ಲಿ ಒಂದು ರೈತ ಕುಟುಂಬಕ್ಕೆ ಗರಿಷ್ಠ ರೂ. 1 ಲಕ್ಷ ರೂ. ವರೆಗೆ ಸಾಲ ಮನ್ನಾ. ಈ ಅವಧಿಯಲ್ಲಿ ಸಾಲ ಪಡೆದ ರೈತರು ಮೃತಪಟ್ಟರೆ ಅಂತಹ ವಾರಸುದಾರರಿಗೂ ಸಹ ಸೌಲಭ್ಯ.
3]ಮನ್ನಾವಾಗುವ ಸಾಲ ರೈತರ ಸಾಲ ಮರುಪಾವತಿ ಮಾಡುವ ದಿನಾಂಕಕ್ಕೆ ಜಾರಿ
4] ಜು.10, 2010,ಕ್ಕೆ ಹೊರ ಬಾಕಿಯಿರುವ ಮೊತ್ತವನ್ನು ಸರ್ಕಾರದ ಆದೇಶ ಜಾರಿಯಾಗುವ ದಿನಾಂಕಕ್ಕೆ ಮರುಪಾವತಿಸಿದ್ದಲ್ಲಿ ಮನ್ನಾ ಆಗಬೇಕಾದ ಮೊತ್ತ ರೈತರ ಉಳಿತಾಯ ಖಾತೆಗೆ ಜಮಾ.
5] ಮನ್ನಾ ಆಗುವ ಅನುದಾನವನ್ನು ಡಿಬಿಟಿ ಮೂಲಕ ರೈತರ ಉಳಿತಾಯ ಖಾತೆಗೆ ಬಿಡುಗಡೆ
6) ಸರ್ಕಾರಿ ಅಥವಾ ಸಹಕಾರಿ ಕ್ಷೇತ್ರದಲ್ಲಿ 20 ಸಾವಿರಕ್ಕಿಂತ ಹೆಚ್ಚಿನ ವೇತನ ಹಾಗೂ ಪಿಂಚಣಿ ಪಡೆಯುತ್ತಿದ್ದರೆ ಸಾಲಮನ್ನಾ ವ್ಯಾಪ್ತಿಗೆ ಬರಲ್ಲ.
7)ಕಳೆದ 3 ವರ್ಷಗಳಲ್ಲಿ ಯಾವುದಾದರೂ ಒಂದು ವರ್ಷ ಆದಾಯ ತೆರಿಗೆ ಪಾವತಿಸಿದ್ದಲ್ಲಿ ಅಂತಹ ರೈತರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.
8] ಕೃಷಿ , ಚಿನ್ನಾಭರಣ ಅಡವು ಸಾಲ, ವಾಹನ ಖರೀದಿ ಸಾಲ, ಪಶು ಆಹಾರ ಯೋಜನೆಯ ಸಾಲ, ಮೀನಿಗಾರಿಕೆ, ಸ್ವಸಹಾಯ ಸಾಲ, ಜಂಟಿ ಬಾಧ್ಯತಾ ಗುಂಪುಗಳಿಗೆ ನೀಡುವ ಸಾಲಗಳಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.
9] ರೈತರು ಒಂದಕ್ಕಿಂತ ಹೆಚ್ಚಿನ ಸಹಕಾರ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದಲ್ಲಿ ಒಂದು ಸಂಸ್ಥೆಯಿಂದ ಮಾತ್ರ ಸಾಲ ಮನ್ನಾ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ
10] ಈ ಯೋಜನೆಯಿಂದ 20.38 ಲಕ್ಷ ರೈತರಿಗೆ 9448.61 ಕೋಟಿಗಳ ಸೌಲಭ್ಯ ದೊರೆಯಲಿದೆ.