ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ, ಖಾತೆ ಹಂಚಿಕೆ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶನಿವಾರ ಸಂಜೆ ತಿಳಿಸಿದರು. 

ಮಂಡ್ಯ: ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ, ಖಾತೆ ಹಂಚಿಕೆ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶನಿವಾರ ಸಂಜೆ ತಿಳಿಸಿದರು. 

Add Asianetnews Kannada as a Preferred SourcegooglePreferred

ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ಮಂಡ್ಯದಲ್ಲಿ ಜೆಡಿಎಸ್‌ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ಅವರು, ಖಾತೆ ಹಂಚಿಕೆ ಬಗ್ಗೆ ಒಂದು ವಾರ ತಾಳ್ಮೆಯಿಂದ ಕಾಯಿರಿ. ಎಲ್ಲ ಸಮಸ್ಯೆಗಳು ಸರಿ ಹೋಗುತ್ತದೆ. ನೀವು (ಮಾಧ್ಯಮಗಳು) ಒಂದು ವಾರ ಸುಮ್ಮನಿದ್ದರೆ ಎಲ್ಲವೂ ಸರಿ ಹೋಗುತ್ತದೆ ಮನವಿ ಮಾಡಿದರು.

ಸಚಿವ ಸಿ.ಎಸ್‌.ಪುಟ್ಟರಾಜುಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಬೇಕು. ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿಗೆ ಸಂಪುಟದಲ್ಲಿ ಅಥವಾ ನಿಗಮ ಮಂಡಳಿಯಲ್ಲಿ ಅವಕಾಶ ನೀಡಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿ ಕುಮಾರಸ್ವಾಮಿ, ಕೆಲ ದಿನ ಕಾಯ್ದು ನೋಡಿ ಎಂದೇಳಿ ಮೈಸೂರಿನತ್ತ ತೆರಳಿದರು.

ಸಿಎಂ ಕುಮಾರಸ್ವಾಮಿ ಆಗಮನದ ಸುದ್ದಿ ತಿಳಿದು ನೂರಾರು ಜೆಡಿಎಸ್‌ ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಸ್ವಾಗತಿಸಲು ತಮ್ಮ ಬೇಡಿಕೆಗಳನ್ನು ಮಂಡಿಸಲು ನಗರದ ಬಿ.ಜಿ.ದಾಸೇಗೌಡ ವೃತ್ತದಲ್ಲಿ ಕಾಯ್ದಿದ್ದರು. ಕೆಲಕ್ಷಣ ಕಾರು ನಿಲ್ಲಿಸಿದ ಅವರು, ಕಾರ್ಯಕರ್ತರತ್ತ ಕೈ ಬೀಸಿ ನಮಸ್ಕರಿಸಿದರು. ಇದಕ್ಕೂ ಮೊದಲು ಮದ್ದೂರು ರುದ್ರಾಕ್ಷಿಪುರ ಗೇಟ್‌ ಬಳಿ ಜೆಡಿಎಸ್‌ ಕಾರ್ಯಕರ್ತರು, ಮುಖಂಡರು ಸಿಎಂ ಕುಮಾರಸ್ವಾಮಿ ಅವರನ್ನು ಅಭಿನಂದಿಸಿದರು.