ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ? ಯಾವಾಗ..?
ಸಚಿವ ಸಂಪುಟ ವಿಸ್ತರಣೆ ಇದೇ ಡಿಸೆಂಬರ್ 22 ರಂದು ಆಗಲಿದೆ ಎಂದು ಮುಖಂಡರು ಹೇಳುತ್ತಿದ್ದಾರೆ. ಆದರೆ ಈ ದಿನಾಂಕದಿಂದಲೂ ಕೂಡ ವಿಸ್ತರಣೆ ಮುಂದೂಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು : ಕಾಂಗ್ರೆಸ್ ನಲ್ಲಿ ಇದೀಗ ಮೂರು ಗುಂಡುಪುಗಳು ರಚನೆಯಾಗಿದೆ. ಶಾಸಕರ ಗುಂಪುಗಳು ನಿರ್ಮಾಣವಾಗಲು ಸಚಿವ ಸಂಪುಟ ವಿಸ್ತರಣೆ ಇವತ್ತಲ್ಲ ನಾಳೆ ಆಗುತ್ತದೆ ಎಂಬ ನಿರೀಕ್ಷೆ ಕಾರಣ ಎಂದು ಹೇಳಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆಪ್ತ ಮೂಲಗಳು ಡಿ. 22ರಂದು ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳುತ್ತಿದ್ದರೂ, ಅದನ್ನು ನಂಬಲು ಶಾಸಕರು ಸೇರಿದಂತೆ ಯಾರೊಬ್ಬರೂ ತಯಾರಿಲ್ಲ.
ಕಾಂಗ್ರೆಸ್ನ ಉನ್ನತ ಮೂಲಗಳ ಪ್ರಕಾರ ಸಂಪುಟ ವಿಸ್ತರಣೆ ಮತ್ತೊಮ್ಮೆ ಮುಂದೂಡಿಕೆ ಕಾಣುವುದು ಖಚಿತ. ಆದರೆ, ಶಾಸಕರ ಒತ್ತಡ ತೀವ್ರವಿರುವ ಹಿನ್ನೆಲೆಯಲ್ಲಿ ಶೂನ್ಯ ಮಾಸದ ನಂತರ ಸಂಪುಟ ವಿಸ್ತರಣೆ ಸಾಧ್ಯತೆಯಿದೆ ಎಂದೇ ಶಾಸಕರು ನಂಬುತ್ತಿದ್ದಾರೆ.
ಸಂಪುಟ ವಿಸ್ತರಣೆ, ನಿಗಮ ಮಂಡಳಿ ಹಾಗೂ ಕಾಂಗ್ರೆಸ್ ಪಾಲಿಗೆ ಬರುವ ನಾಲ್ಕು ಮಂದಿ ರಾಜಕೀಯ ಕಾರ್ಯದರ್ಶಿಗಳ ನೇಮಕಾತಿಯೂ ನಡೆಯುತ್ತದೆ. ಲೋಕಸಭೆ ಚುನಾವಣೆವರೆಗೂ ಮುಂದೂಡಿಕೆ ಕಾಣುವುದಿಲ್ಲ ಎಂಬ ನಂಬಿಕೆ ಈ ಶಾಸಕರದ್ದು. ಹೀಗಾಗಿ, ನಾಯಕತ್ವದ ಮೇಲೆ ಒತ್ತಡ ನಿರ್ಮಾಣ ಮಾಡಲು ಕಾಂಗ್ರೆಸ್ನಲ್ಲಿ ಶಾಸಕರ ಗುಂಪುಗಳು ನಿರ್ಮಾಣಗೊಳ್ಳುತ್ತಿವೆ ಎನ್ನಲಾಗಿದೆ.