ಎಲ್ಲ ಕ್ಷೇತ್ರ ಗೆಲ್ತೀವಿ: ಕಟೀಲ್‌| ಅನರ್ಹ ಶಾಸಕರ ತ್ಯಾಗಕ್ಕೆ ಅನ್ಯಾಯವಾಗದು| ಎಲ್ಲ 15 ಕ್ಷೇತ್ರದಲ್ಲಿ ಬಿಜೆಪಿಗೆ ಪೂರಕ ವಾತಾವರಣ

ಬೆಂಗಳೂರು[ಸೆ.22]: ಅನರ್ಹ ಶಾಸಕರ ತ್ಯಾಗಕ್ಕೆ ಅನ್ಯಾಯವಾಗದ ರೀತಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಉಪ ಚುನಾವಣೆಯಲ್ಲಿ ನಾವು 15 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಗೆ ಬಿಜೆಪಿ ಸಿದ್ಧವಾಗಿದೆ. ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿ ಮುಖಂಡರ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಿ ಚುನಾವಣೆ ಎದುರಿಸುತ್ತೇವೆ ಎಂದರು.

ಚುನಾವಣೆಗಳು ಬಂದಾಗ ಈ ರೀತಿ ಕೆಲ ಗೊಂದಲಗಳು ಆಗೋದು ಸಾಮಾನ್ಯವಾಗಿದೆ. ಅವುಗಳನ್ನು ಸರಿ ಮಾಡಿಕೊಂಡು ಚುನಾವಣೆಗೆ ಪೂರ್ಣ ಸಿದ್ಧತೆ ಮಾಡುತ್ತಿದ್ದೇವೆ. ಸವಾಲುಗಳಿಲ್ಲದಿದ್ದರೆ ರಾಜಕಾರಣವೇ ಅಲ್ಲ. ನಾವು 15 ಕ್ಷೇತ್ರಗಳಲ್ಲಿ ಕೂಡಾ ಜಯ ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಎಲ್ಲೆಡೆ ಪಕ್ಷಕ್ಕೆ ವಾತಾವರಣ ಅದ್ಭುತವಾಗಿದೆ. ಖಂಡಿತ 15 ಸ್ಥಾನ ಗೆಲ್ಲುತ್ತಿವೆ. ಅನರ್ಹ ಶಾಸಕರ ತ್ಯಾಗಕ್ಕೆ ಅನ್ಯಾಯ ಆಗದ ರೀತಿ ನೋಡಿಕೊಳ್ಳುವ ಜವಾಬ್ಬಾರಿ ನಮ್ಮದು. ನಾವೆಲ್ಲಾ ಪ್ರಮುಖರು ಸೇರಿ ಕುಳಿತು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಕಟೀಲ್‌ ಹೇಳಿದರು.

ರಾಜ್ಯ ನಾಯಕರ ಒಮ್ಮತದ ಬಳಿಕ ಅಭ್ಯರ್ಥಿಗಳ ಹೆಸರುಗಳನ್ನು ಕೇಂದ್ರ ಸಮಿತಿಗೆ ಕಳಿಸುತ್ತೇವೆ. ಬಳಿಕ ಹುರಿಯಾಳುಗಳ ಆಯ್ಕೆಯನ್ನು ಹೈಕಮಾಂಡ್‌ ತೀರ್ಮಾನಿಸಲಿದೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಮಾಹಿತಿ ನೀಡಿದರು.