ಗೆಲ್ಲದಿದ್ದರೂ ಪರಿಷತ್ 3 ಸ್ಥಾನಕ್ಕೆ ಬಿಜೆಪಿ ಸ್ಪರ್ಧೆ, ಏನಿದರ ಮರ್ಮ?
ಗೆಲ್ಲದಿದ್ದರೂ ವಿಧಾನಪರಿಷತ್ ಚುನಾವಣೆಯ 3 ಸ್ಥಾನಗಳಿಗೆ ಬಿಜೆಪಿ ಸ್ಪರ್ಧೆ? ನಾಳೆ ಅಭ್ಯರ್ಥಿಗಳು ಅಂತಿಮ ಸಾಧ್ಯತೆ. ಸಮ್ಮಿಶ್ರ ಸರ್ಕಾರದ ಪಾಲುದಾರಿಕೆಯಲ್ಲೂ ಬಿಜೆಪಿ ಸ್ಪರ್ಧೆ? ಏನಿದರ ಹಿಂದಿನ ಮರ್ಮ?. ಇಲ್ಲಿದೆ ಡಿಟೇಲ್ಸ್.
ಬೆಂಗಳೂರು, [ಸೆ.22]: 3 ಸ್ಥಾನಗಳಿಗೆ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರದಿಂದ 3ಕ್ಕೆ ಮೂರು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿವೆ. ಕಾಂಗ್ರೆಸ್ 2, ಜೆಡಿಎಸ್ 1 ಸ್ಥಾನ ಗೆಲ್ಲುವುದು ಪಕ್ಕಾ ಆಗಿದೆ.
ಇನ್ನು ಬಿಜೆಪಿಗೆ ಗೆಲುವಿನ ಸಾಧ್ಯತೆ ಇಲ್ಲದಿದ್ದರೂ ಮೂರು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದು, ಭಾನುವಾರ ಅಂತಿಮಗೊಳಿಸುವ ಸಾಧ್ಯತೆಯಿದೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲವನ್ನು ಮೂಡಿಸಿದೆ.
ಸೋಮವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಯಾರನ್ನು ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ತೆರೆಮರೆಯಲ್ಲಿ ಚರ್ಚೆ ಆರಂಭವಾಗಿದೆ.
ಅತೃಪ್ತಿಯ ಲಾಭದ ನಿರೀಕ್ಷೆಯಲ್ಲಿ ಬಿಜೆಪಿ
ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಶಾಸಕರಲ್ಲಿ ಇದೆ ಎನ್ನಲಾದ ಅತೃಪ್ತಿಯ ಲಾಭ ಪಡೆದುಕೊಳ್ಳಲು ಬಿಜೆಪಿ ಹವಣಿಸುತ್ತಿದೆ.
ಪ್ರಸ್ತುತ ಸಮ್ಮಿಶ್ರ ಸರ್ಕಾರ ವಿರುದ್ಧ ಭಿನ್ನಮತ ಸ್ಫೋಟಗೊಂಡಿದ್ದು, ಅಡ್ಡಮತದಾನ ನಡೆಯುವ ಲಕ್ಷಣಗಳು ದಟ್ಟವಾಗಿವೆ. ಹಿನ್ನೆಲೆಯಲ್ಲಿ ಇದನ್ನೇ ಬಂಡವಾಳವಾಗಿ ಇಟ್ಟುಕೊಂಡು ಸೋತರೂ ಚಿಂತೆ ಇಲ್ಲ ಅಂತ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಸಲು ಪ್ಲಾನ್ ಮಾಡಿದೆ.
ರೇಸ್ನಲ್ಲಿ ಯಾರ್ಯಾರು?
ವಿಧಾನಪರಿಷತ್ತಿನ ಮಾಜಿ ಸದಸ್ಯರಾದ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಭಾರತಿ ಶೆಟ್ಟಿ, ರಾಜ್ಯ ಬಿಜೆಪಿಯ ಖಜಾಂಚಿ ಸುಬ್ಬ ನರಸಿಂಹ ಅವರ ಹೆಸರುಗಳನ್ನು ಕೇಳಿಬರುತ್ತಿವೆ. ಅಚ್ಚರಿ ಎಂಬಂತೆ ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರ ಹೆಸರೂ ಗಂಭೀರವಾಗಿ ಕೇಳಿರುತ್ತಿದೆ.