ಒಂದೆಡೆ ಪ್ರತ್ಯೇಕ ರಾಜ್ಯದ ಕೂಗು ಜೋರಾಗುತ್ತಿದ್ದರೆ ಆಗಸ್ಟ್ 2 ರಂದು ಬಂದ್ ಇದೆಯೇ? ಇಲ್ಲವೋ ಎಂಬ ಪ್ರಶ್ನೆ ಸಾಮಾನ್ಯ ಜನರಿಗೆ ಕಾಡುತ್ತಿದೆ. ಅದಕ್ಕೆ ಉತ್ತರ ಇಲ್ಲಿದೆ.

ಬೆಂಗಳೂರು[ಜು.31]  ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಬಂದ್ ಇದ್ಯಾ..? ಇಲ್ವಾ..? ಎಂಬುದನ್ನು ಬುಧವಾರ ನಿರ್ಧಾರ ಮಾಡಲಾಗುವುದು ಎಂದು ಹೋರಾಟ ಸಮಿತಿ ಗೌರವ ಅಧ್ಯಕ್ಷ ಬಸವರಾಜ್ ದಿಂಡೂರ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ದಿಂಡೂರ, ಆಗಸ್ಟ್ 2ರ ಗುರುವಾರ ಉತ್ತರ ಕರ್ನಾಟಕ ಬಂದ್ ಬಗ್ಗೆ ನಾಳೆ ತೀರ್ಮಾನ ಮಾಡುತ್ತೇವೆ. ಹುಬ್ಬಳ್ಳಿಯಲ್ಲಿ ವಿವಿಧ ಸಂಘಟನೆಗಳೊಂದಿಗೆ ಸಭೆ ಸೇರಿ ನಿರ್ಧಾರಕ್ಕೆ ಬರುತ್ತೇವೆ ಎಂದರು.

ಉತ್ತರಕರ್ನಾಟಕ ಸಮಗ್ರ ಅಭಿವೃದ್ಧಿಗೆ ಸರ್ಕಾರ ಸ್ಪಂದಿಸದಿದ್ರೆ ಪ್ರತ್ಯೇಕ ರಾಜ್ಯ ಹೋರಾಟ ಖಂಡಿತ ಮುಂದುವರಿಯಲಿದೆ. 2022ರವರೆಗೂ ರಾಜ್ಯ ಸರ್ಕಾರಕ್ಕೆ ಗಡುವು ನೀಡುತ್ತೇವೆ. ತಾರತಮ್ಯ ಮಾಡುತ್ತಲೇ ಇದ್ದರೆ ಪ್ರತ್ಯೇಕ ರಾಜ್ಯ ಅನಿವಾರ್ಯ ಎಂದು ಹೇಳಿದರು.

"ಕಿತ್ತೂರು ಕರ್ನಾಟಕ" ಎಂದು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಚಿಂತನೆ ನಡೆದಿದೆ. ಹೈದರಾಬಾದ್-ಮುಂಬೈ ಪ್ರಾಂತ್ಯದ 14 ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯ ನಿರ್ಮಾಣ ಮಾಡಿಕೊಳ್ಳುತ್ತೇವೆ. ಚಿಕ್ಕೋಡಿಯನ್ನೂ ಜಿಲ್ಲೆಯಾಗಿ ಸೇರಿಸಿಕೊಂಡು ಒಟ್ಟು 14 ಜಿಲ್ಲೆಗಳ ರಾಜ್ಯ ನಿರ್ಮಾಣ ಮಾಡುತ್ತೇವೆ. ಸೋಮಶೇಖರ್ ಕೊತ್ತಂಬರಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಅಂತಿಮ ತಿರ್ಮಾನ ಮಾಡುತ್ತೇವೆ ಎಂದರು.