ಶಾಲಾ-ಕಾಲೇಜುಗಳಲ್ಲಿ ಡೊನೇಷನ್ ಹಾವಳಿ; ತನ್ವೀರ್ ಸೇಠ್ ಮನೆಗೆ ಕರವೇ ಮುತ್ತಿಗೆ
ಖಾಸಗಿ ಶಾಲಾ-ಕಾಲೇಜುಗಳ ಡೊನೇಷನ್ ಹಾವಳಿ ತಡೆಗೆ ಒತ್ತಾಯಿಸಿ ಕರವೇ ಮುಖಂಡರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಮನೆಗೆ ಮುತ್ತಿಗೆ ಹಾಕಿದರು.
ಬೆಂಗಳೂರು (ಅ.07): ಖಾಸಗಿ ಶಾಲಾ-ಕಾಲೇಜುಗಳ ಡೊನೇಷನ್ ಹಾವಳಿ ತಡೆಗೆ ಒತ್ತಾಯಿಸಿ ಕರವೇ ಮುಖಂಡರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಮನೆಗೆ ಮುತ್ತಿಗೆ ಹಾಕಿದರು.
ಸೆವೆನ್ ಮಿನಿಷ್ಟರ್ ಕ್ವಾಟ್ರಸ್’ನಲ್ಲಿರುವ ಸಚಿವರ ಮನೆಗೆ ನುಗ್ಗಿದ ಕಾರ್ಯಕರ್ತರು ಕಿಟಕಿ, ಹೂ ಕುಂಡಗಳನ್ನು ಒಡೆದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಇಬ್ಬರು ಭದ್ರತಾ ಸಿಬ್ಬಂದಿಗಳು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಹಾಗಾಗಿ ಮನೆಯೊಳಗಿದ್ದ ಸಚಿವ ತನ್ವೀರ್ ಸೇಠ್ ಹೊರಬರಲು ಹಿಂದೇಟು ಹಾಕಿದರು. ಕೆಲಹೊತ್ತಿನ ಬಳಿಕ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಸಚಿವರ ಮನೆಗೆ ಬಂದರು. ಆ ಸಂದರ್ಭದಲ್ಲಿ ಹೊರ ಬಂದ ಸಚಿವ ತನ್ವೀರ್ ಸೇಠ್ ಪ್ರತಿಭಟನಾ ನಿರತರ ಮನವಿ ಸ್ವೀಕರಿಸಿದರು. ಆದರೆ ಪೂರ್ವಾನುಮತಿ ಪಡೆಯದೆ ಸಚಿವರ ಮನೆಗೆ ನುಗ್ಗಿ ಧರಣಿ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ನಾವೂ ಗಾಜಿನ ಮನೆಯಲ್ಲಿ ಇದ್ದವರು. ಸಾರ್ವಜನಿಕ ಬದುಕಿನಲ್ಲಿ ಇರುವಾಗ ಭದ್ರಕೋಟೆಯಲ್ಲಿ ಇರಲು ಆಗಲ್ಲ. ಖಾಸಗಿ ಶಾಲಾ-ಕಾಲೇಜುಗಳಲ್ಲಿ ಡೊನೇಷನ್ ಹಾವಳಿ ತಡೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.ಈ ವಿಚಾರವಾಗಿ ಕರವೇ ಸಂಘಟನೆ ನನಗೆ ಯಾವುದೇ ದೂರು ನೀಡಿಲ್ಲ ಅಂತಾ ತನ್ವೀರ್ ಸೇಠ್ ಸ್ಪಷ್ಟಪಡಿಸಿದರು.