ಸಿಂಗಾಪುರ ಏರ್ಲೈನ್ಸ್ನಲ್ಲಿ ಊಟದ ಮೆನು, ಪ್ರಕಟಣೆಗಳು ಕನ್ನಡದಲ್ಲಿ ರಾಜಕೀಯ ತಿರುವು ಪಡೆದುಕೊಂಡ ಪ್ರಧಾನ ಕಾರ್ಯದರ್ಶಿ ಟ್ವೀಟ್ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನೀತಿ ಟೀಕಿಸಿದ ಸಿದ್ದರಾಮಯ್ಯ
ಬೆಂಗಳೂರು (ಮೇ. 01): ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್, ಕನ್ನಡದ ಬಗ್ಗೆ ಮಾಡಿರುವ ಟ್ವೀಟ್ ಇದೀಗ ’ಹಿಂದಿ ಹೇರಿಕೆ’ಯ ರಾಜಕೀಯ ತಿರುವನ್ನು ಪಡೆದುಕೊಂಡಿದೆ.
ಸಿಂಗಾಪುರದಿಂದ ಬೆಂಗಳೂರಿಗೆ ಪ್ರಯಾಣಿಸುವ ಸಿಂಗಾಪುರ ಏರ್ಲೈನ್ಸ್ [ವಿಮಾನ ಸಂಖ್ಯೆ- SQ502] ನಲ್ಲಿ ಊಟದ ಮೆನು ಹಾಗೂ ಪ್ರಕಟಣೆಗಳನ್ನು ನಿರರ್ಗಳವಾಗಿ ಕನ್ನಡದಲ್ಲಿ ಮಾಡಲಾಗುತ್ತದೆ. ಬೆಂಗಳೂರಿಗೆ ಬರುವ ಹಾಗೂ ಇಲ್ಲಿಂದ ಹೊರಡುವ ವಿಮಾನಗಳಲ್ಲಿ ಈ ವ್ಯವಸ್ಥೆಯೇಕೆ ಸಾಧ್ಯವಿಲ್ಲ? ಇದು ಬಹಳ ಕಷ್ಟವಾದುದೇನಲ್ಲ.. ಎಂದು ಟ್ವೀಟಿಸಿದ್ದರು.
ಅದಕ್ಕೆ ಪ್ರತಿಕ್ರಿಯಿಸುತ್ತಾ ರೀಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಇದು ವಿಮಾನಯಾನ ಸಂಸ್ಥೆಗಳ ಸಾಮರ್ಥ್ಯಕ್ಕಿಂತ ಹೆಚ್ಚಾಗಿ, ಕೇಂದ್ರ ವಿಮಾನಯಾನ ಸಚಿವಾಲಯದ ಹಿಂದಿ ಹೇರಿಕೆಗೆ ಸಂಬಂಧಪಟ್ಟ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಈ ಚರ್ಚೆಯಲ್ಲಿ ಪಾಲ್ಗೊಂಡ ಇತರ ಟ್ವಿಟರಿಗರು ಕೂಡಾ ವಿಮಾನಯಾನ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
