ರಾಮಕಥೆ ಕೇಳಲು ಅಯೋಧ್ಯೆಗೆ ಬಂದ ಕಾಮಾಟಿಪುರ ಸ್ತ್ರೀಯರು ! ಮೊರಾರಿ ಬಾಪು ಆಹ್ವಾನಕ್ಕೆ ಭಾರೀ ವಿರೋಧ | 

ಅಯೋಧ್ಯೆ (ಡಿ. 24): ಏಕಪತ್ನಿ ವ್ರತಸ್ತ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಶನಿವಾರ ಆಯೋಜನೆಗೊಂಡಿದ್ದ ರಾಮಕಥಾ ಕಾರ್ಯಕ್ರಮ ಹಿಂದೂ ಸಂಘಟನೆಗಳಿಂದಲೇ ಭಾರೀ ಆಕ್ಷೇಪಕ್ಕೆ ತುತ್ತಾಗಿದೆ. ಇದಕ್ಕೆ ಕಾರಣ, ಶನಿವಾರದ ಕಾರ್ಯಕ್ರಮಕ್ಕೆ ಮುಂಬೈನ ಕಾಮಾಟಿಪುರ (ವೇಶ್ಯಾಗೃಹಗಳಿರುವ ಪ್ರದೇಶದ ಹೆಸರು)ದ ನೂರಾರು ಮಹಿಳೆಯರು ಆಗಮಿಸಿದ್ದುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲೈಂಗಿಕ ಕಾರ್ಯಕರ್ತೆಯರ ಜೀವನ ಬದಲಾವಣೆ ನಿಟ್ಟಿನಲ್ಲಿ ಪ್ರಸಿದ್ಧ ರಾಮಕಥಾ ಗಾಯಕರಾದ ಮೊರಾರಿ ಬಾಪು ಅವರು ಇತ್ತೀಚೆಗೆ ಮುಂಬೈನ ಕಾಮಾಟಿಪುರಕ್ಕೆ ತೆರಳಿ, ಅಲ್ಲಿನ ಮಹಿಳೆಯರೊಂದಿಗೆ ಚರ್ಚೆ ನಡೆಸಿದ್ದರು. ಜೊತೆಗೆ ಶನಿವಾರ (ಡಿ.22) ರಾಮಕಥಾ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಹೀಗಾಗಿ ಆಹ್ವಾನ ಮನ್ನಿಸಿ ಬಂದ ಮಹಿಳೆಯರು, ಶನಿವಾರ ಇಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆ ಎದುರಿಸಿದ್ದಾರೆ.

ತಮ್ಮ ಪಾಪಗಳನ್ನು ಕಳೆದುಕೊಳ್ಳಲು ಅಯೋಧ್ಯೆಗೆ ದೇಶದ ವಿವಿಧ ಭಾಗಗಳಿಂದ ಜನರು ಬರುತ್ತಾರೆ. ಹೀಗಿರುವಾಗ ಇಂಥ ಸ್ಥಳಕ್ಕೆ ಲೈಂಗಿಕ ಕಾರ್ಯಕರ್ತೆಯರನ್ನ ಆಹ್ವಾನಿಸುವುದು ತಪ್ಪು ಸಂದೇಶ ರವಾನಿಸುತ್ತದೆ ಎಂದು ದಂಡಿಯಾ ದೇಗುಲದ ಅರ್ಚಕ ಭರತ್‌ ವ್ಯಾಸ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲ ಸಂಘಟನೆಗಳು ಈ ಕುರಿತು ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೂ ದೂರು ಸಲ್ಲಿಸಿದ್ದಾರೆ.

ಆದರೆ ಮೊರಾರಿ ಬಾಪು ಮಾತ್ರ, ರಾಮಚರಿತ ಮಾನಸ ಬರೆದಿರುವ ತುಳಸಿದಾಸರೇ, ರಾಮಾಯಣದಲ್ಲಿ ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜೊತೆಗೆ ಅವರ ಜೀವನ ಸುಧಾರಣೆಗೆ ಪರಿಹಾರ ಸೂಚಿಸಿದ್ದಾರೆ ಎಂದು ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.